ಹುಬ್ಬಳ್ಳಿ: ಹೊಸದಾಗಿ ಕೃಷಿ ಪಂಪ್ಸೆಟ್ ಅಳವಡಿಸುವುದನ್ನು ಸ್ಥಗಿತಗೊಳಿಸಿರುವ ಸರ್ಕಾರ ಒಂದೆಡೆಯಾದರೆ, ಕೆಟ್ಟುಹೋಗಿರುವ ಹಳೆಯ ಟ್ರಾನ್ಸ್ಫಾರ್ಮರ್ಗಳನ್ನು ಬದಲಾಯಿಸಲು ಹೆಸ್ಕಾಂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ರೈತರು ತೀವ್ರ ಕಷ್ಟ ಎದುರಿಸುತ್ತಿದ್ದಾರೆ.
ಇದು ಕೇವಲ ರೈತರ ಜೀವನದ ಮೇಲಲ್ಲದೇ ಕೃಷಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಅಪಾಯ ತಂದೊಡ್ಡಿದೆ.
ಕಳೆದ ವರ್ಷಕ್ಕಿಂತ ಮುಂಚೆ ಸರ್ಕಾರವೇ ರೈತರ ಜಮೀನುಗಳಲ್ಲಿ ನೀರಾವರಿ ಪಂಪ್ಸೆಟ್ ಅಳವಡಿಸುತ್ತಿತ್ತು. ಇದಕ್ಕಾಗಿ ಬೇಕಾದ ವಿದ್ಯುತ್ ತಂತಿ, ಕಂಬ, ಟ್ರಾನ್ಸ್ಫಾರ್ಮರ್ಗಳನ್ನು ಪೂರೈಸುತ್ತಿತ್ತು. 5-6 ಪಂಪ್ಸೆಟ್ಗಳಿಗೆ ಒಂದರಂತೆ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗಿತ್ತು. ಹೀಗಾಗಿ ಗುಣಮಟ್ಟದ ವಿದ್ಯುತ್ ದೊರಕುತ್ತಿತ್ತು, ಹೊಲಗಳಿಗೆ ನೀರು ಹಾಯಿಸಲು ಸಾಕಷ್ಟು ಅನುಕೂಲವಾಗಿತ್ತು. ಇದರಿಂದಾಗಿ ಕೃಷಿ ಉತ್ಪಾದನೆ ಹೆಚ್ಚಾಗಿ ರೈತರಿಗೆ ನೆರವಾಗಿತ್ತು.
ಕೃಷಿ ಪಂಪ್ಸೆಟ್ ಅಳವಡಿಸಲು ನೀಡುತ್ತಿದ್ದ ನೆರವನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರವು ಕಳೆದ ವರ್ಷ ಜುಲೈ ತಿಂಗಳಲ್ಲಿ ಆದೇಶ ಹೊರಡಿಸಿದೆ. ರೈತರು ಸ್ವಂತ ಖರ್ಚಿನಲ್ಲಿ ಪಂಪ್ಸೆಟ್ ಹಾಗೂ ಟ್ರಾನ್ಸ್ಫಾರ್ಮರ್ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದೆ. ಇದಕ್ಕೆ ಪರ್ಯಾಯವಾಗಿ ಸೋಲಾರ್ (ಸೌರಶಕ್ತಿ) ಬಳಸಿಕೊಳ್ಳಲು ಪ್ರೋತ್ಸಾಹ ನೀಡಲು ಆರಂಭಿಸಿದೆ. ಈ ಮೊದಲು ಶೇ 50ರಷ್ಟಿದ್ದ ಸಬ್ಸಿಡಿಯನ್ನು ಶೇ 80ಕ್ಕೆ ಹೆಚ್ಚಿಸಿದೆ. ಕೇವಲ ಶೇ 20ರಷ್ಟು ವೆಚ್ಚವನ್ನು ಫಲಾನುಭವಿಗಳು ಭರಿಸಿದರೆ ಇನ್ನುಳಿದ ವೆಚ್ಚವನ್ನು ತಾನೇ ಭರಿಸುವುದಾಗಿ ಸರ್ಕಾರ ಹೇಳಿದೆ.