ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆ, ಅನಂತರ ಡಿಸಿಎಂ ಹುದ್ದೆ ಸೃಷ್ಟಿ ಮತ್ತಿತರ ವಿಷಯಗಳಲ್ಲಿ ವ್ಯಕ್ತವಾದ ಬಣಗಳ ಬಡಿದಾಟದಿಂದ ತೀವ್ರ ಬೇಸರಗೊಂಡಿರುವ ಕಾಂಗ್ರೆಸ್ನ ರಾಷ್ಟ್ರೀಯ ನಾಯಕರು ಮುಂದಿನ 2 ತಿಂಗಳಲ್ಲಿ ಸಚಿವರ ಕಾರ್ಯವೈಖರಿ ಬದಲಾಗದಿದ್ದರೆ ಸ್ಥಾನ ತೊರೆಯಲು ಸಜ್ಜಾಗುವಂತೆ ಸೂಚಿಸಿದ್ದಾರೆ.
ಈ ಮೂಲಕ ಸಚಿವ ಸಂಪುಟ ಪುನಾರಚನೆಯ ಸ್ಪಷ್ಟ ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರವಿವಾರ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಲ್ಲ ಸಚಿವರಿಗೆ ಅಕ್ಷರಶಃ ಚಾಟಿ ಬೀಸಿದರು. ಚುನಾವಣೆಗೆ ಮೊದಲೇ ಸಚಿವರ ಜವಾಬ್ದಾರಿ ಯನ್ನು ನೆನಪಿಸಲಾಗಿತ್ತು.
ಮೌಲ್ಯಮಾಪನದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಸ್ವತಃ ನೀವು ಹೇಳಿದವರಿಗೇ ಟಿಕೆಟ್ ಕೂಡ ನೀಡಲಾಯಿತು. ಆದಾಗ್ಯೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಮತ್ತೂಂದೆಡೆ ಬಣಗಳ ಬಡಿದಾಟವೂ ನಿಂತಿಲ್ಲ. ಈ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. 2 ತಿಂಗಳುಗಳಲ್ಲಿ ಕಾರ್ಯವೈಖರಿ ಬದಲಾಗಬೇಕು. ಇಲ್ಲದಿದ್ದರೆ ನಿಮ್ಮ ಬದಲಿಗೆ ಬೇರೆಯವರನ್ನು ತರಲಾಗುವುದು ಎಂದು ಗಡುವು ನೀಡಿದರು.
ಸಚಿವರು ಮತ್ತು ನಿಗಮ-ಮಂಡಳಿಗಳ ಅಧ್ಯಕ್ಷರ ನಡುವೆ ಸಮನ್ವಯ ಇಲ್ಲ. ಶಾಸಕರೊಂದಿಗೂ ತಿಕ್ಕಾಟ ಮುಂದುವರಿದಿದ್ದು, ಈಗಲೂ ದೂರುಗಳು ಬರುತ್ತಿವೆ. ಕಾರ್ಯಕರ್ತರೊಂದಿಗೂ ಮುಖ ಕೊಟ್ಟು ಮಾತನಾಡುವುದಿಲ್ಲ ಎಂಬ ಆರೋಪಗಳಿವೆ.
ಇಡೀ ವರ್ಷದ ಇಲಾಖೆಗಳ ಸಾಧನೆಯೂ ಅಷ್ಟಕ್ಕಷ್ಟೇ. ಸತ್ಯಶೋಧನ ಸಮಿತಿ ಭೇಟಿ ವೇಳೆಯೂ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ “ಪ್ರಗತಿಪತ್ರ’ ತೃಪ್ತಿಕರವಾಗಿಲ್ಲ. ಸುಧಾರಣೆಗೆ ಇದು ಕೊನೆಯ ಅವಕಾಶ. ಎರಡು ತಿಂಗಳುಗಳ ಅನಂತರ ಮತ್ತೂಮ್ಮೆ ಮೌಲ್ಯಮಾಪನ ಮಾಡಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿರುವುದಾಗಿ ಮೂಲಗಳು ತಿಳಿಸಿವೆ.