ಕೊಪ್ಪಳ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಕುಣಿಸಿದಂತೆ ಕುಣಿಯುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.
ಕೊಪ್ಪಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಟಿ.ಜೆ.ಅಬ್ರಹಾಂ ಓರ್ವ ಬ್ಲಾಕ್ ಮೇಲರ್.
ಆತನ ವಿರುದ್ಧ ಸುಪ್ರೀಂ ಕೋರ್ಟ್ 20 ಲಕ್ಷ ದಂಡ ಹಾಕುವ ಮೂಲಕ ಛೀಮಾರಿ ಹಾಕಿ ಕಳುಹಿಸಿದೆ. ಅಂತಹ ವ್ಯಕ್ತಿ ರಾಜ್ಯಪಾಲರಿಗೆ ಬೆಳಗ್ಗೆ 11:30ಕ್ಕೆ ದೂರು ನೀಡಿದರೆ ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿಗಳಿಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಇದನ್ನು ನೋಡಿದರೆ ರಾಜಪಾಲರು ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಹೇಳಿದಂತೆ ಕುಣಿಯುತ್ತಿರುವುದು ಗೊತ್ತಾಗುತ್ತಿದೆ. ರಾಜ್ಯಪಾಲರ ನಡೆಯನ್ನು ಕನ್ನಡಿಗರು, ಕರ್ನಾಟಕದ ಜನತೆ ಎಂದಿಗೂ ಸಹಿಸಲ್ಲ ಎಂದರು.
ಮುಡಾದಲ್ಲಿ ಅವ್ಯವಾರವಾಗಿದೆ ಎಂಬ ವಿಚಾರ ಕೇಳಿ ಬಂದ ಕೂಡಲೇ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಂಗ ತನಿಖೆಗೆ ವಹಿಸಿದ್ದಾರೆ. ನ್ಯಾಯಾಂಗ ತನಿಖೆ ಆಗುತ್ತಿದೆ. ತನಿಖೆ ನಡೆದು ಬಿಜೆಪಿಗರ ಬಣ್ಣ ಬಯಲಾಗಲಿದೆ ಎಂದರು.