ವಯನಾಡ್: ಪೊಟ್ಟಮಾಲ್ನಲ್ಲಿ ಒಂದೇ ಕುಟುಂಬದ 6 ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಇಡೀ ಮನೆ ನೀರು ಪಾಲಾಗಿದೆ. ಆದರೆ, ಅದೇ ಮನೆಯ 40 ದಿನದ ಹಸುಗೂಸು ಅನರಾ ಮತ್ತು 6 ವರ್ಷದ ಕಂದಮ್ಮ ಮೊಹಮ್ಮದ್ ಹಯನ್ ಮಾತ್ರ ಮೃತ್ಯುಪಾಶದಿಂದ ಪಾರಾಗಿ ದ್ದಾರೆ. ಪ್ರವಾಹದ ನೀರು ಮನೆ ಆವರಿಸುತ್ತಿದ್ದಂತೆಯೇ ಮಕ್ಕಳ ತಾಯಿ ಇಬ್ಬರೂ ಮಕ್ಕಳನ್ನು ಕೈಯಲ್ಲಿ ಹಿಡಿದು ಪಕ್ಕದ ಮನೆಯ ಮಹಡಿ ತಲುಪುವಲ್ಲಿ ಸಫಲರಾಗಿದ್ದಾರೆ.
ಅನರಾಳನ್ನು ಅಲ್ಲಿ ರಕ್ಷಿಸಲಾಗಿದೆ. ಇತ್ತ ಹಯನ್ ತಾಯಿಯ ಕೈ ಜಾರಿ ಕೊಚ್ಚಿಹೋಗಿ, ಬಾವಿಯ ಹಗ್ಗದಲ್ಲಿ ಜೋತುಬಿದ್ದು, ರಕ್ಷಣ ಸಿಬ್ಬಂದಿ ಕೈ ಸೇರಿ ಕೊನೆಗೂ ಪಾರಾಗಿದ್ದಾನೆ.
4 ದಿನ ಅನ್ನ ನೀರಿಲ್ಲದೇ ದಿಕ್ಕೆಟ್ಟು ಗುಹೆಯಲ್ಲಿದ್ದ ಕುಟುಂಬ ಪಾರು!
ಚೂರಲ್ವುಲ, ಮುಂಡಕೈನಲ್ಲಿ ಭೂ ಕುಸಿತವಾಗುತ್ತಿದ್ದರೆ ಇತ್ತ ಕಾಡುಗಳನ್ನು ಬದಿಗೊತ್ತಿ ಜಲ ಪ್ರಳಯ ಮುನ್ನುಗಿದೆ. ಅದರ ನಡುವೆಯೇ ಬುಡಕಟ್ಟು ಕುಟುಂಬ ವೊಂದು ಅಟ್ಟಮಲ ಅರಣ್ಯದ ಬೆಟ್ಟವೊಂದ ರ ಗುಹೆಯಲ್ಲಿ ಆಶ್ರಯ ಪಡೆದಿದೆ. ಭೂ ಕುಸಿತ ದಿಂದ ಹೊರ ಪ್ರದೇಶದ ಸಂಪರ್ಕವೂ ಇಲ್ಲದೇ, ಅನ್ನ ನೀರುಗಳಿಲ್ಲದೇ ಕಂಗೆಟ್ಟಿದ್ದ ಕುಟುಂಬವನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸತತ 8 ಗಂಟೆ ಅರಣ್ಯದಲ್ಲಿ ಹುಡುಕಾಟ ನಡೆಸಿ ಈ ಕುಟುಂಬ ಪತ್ತೆ ಯಾಗಿದ್ದು, ಕುಟುಂಬದಲ್ಲಿದ್ದ ದಂಪತಿ ಮತ್ತು 4 ಮಕ್ಕಳನ್ನು ರಕ್ಷಿಸಿ ಹಗ್ಗದ ಮೂಲಕ ಗುಹೆಯಿಂದ ಮೇಲೆ ತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಪವಾಡವೆಂಬಂತೆ ಉಳಿದ ಏಕೈಕ ಮನೆ: 4 ದಿನಗಳ ಬಳಿಕ ಕುಟುಂಬದ ರಕ್ಷಣೆ
ಪ್ರವಾಹಕ್ಕೆ ತತ್ತರಿಸಿದ ಪಡೆವೆಟ್ಟಿಕುನ್ನು ಪ್ರದೇಶದಲ್ಲಿ ಹಲವಾರು ಮನೆಗಳು ಕೊಚ್ಚಿಹೋಗಿವೆ. ಅದರ ನಡುವೆಯೇ ಒಂದು ಮನೆ ಮಾತ್ರ ಸುತ್ತಲಿನ ಸಂಪರ್ಕ ಕಳೆದುಕೊಂಡು ಪ್ರವಾಹದ ನಡುವೆಯೇ ಗಟ್ಟಿಗಾಗಿ ನಿಂತಿದೆ. ಅದೇ ಮನೆಯಲ್ಲಿದ್ದ ನಾಲ್ವರನ್ನು ದುರಂತ ನಡೆದ 4 ದಿನಗಳ ಬಳಿಕ ಪತ್ತೆ ಹಚ್ಚಿ ರಕ್ಷಿಸಲಾಗಿದೆ. ಜಾನ್ ಕೆ.ಜೆ ಅವರ ನಿವಾಸದ ಸುತ್ತಲಿನ ಎಲ್ಲ ಮನೆಗಳು ಕೊಚ್ಚಿ ಹೋಗಿದ್ದು, ನೀರು ಆ ಮಾರ್ಗವಾಗಿ ಸಾಗಿದ ಹಿನ್ನೆಲೆಯಲ್ಲಿ ಜಾನ್ ಅವರ ಮನೆ ಮುಳುಗದೇ ಇರಲು ಸಾಧ್ಯವಾಗಿದೆ. 4 ದಿನಗಳಿಂದ ಅದೇ ಮನೆ ಒಳಗಿದ್ದ ಇಬ್ಬರು ಮಹಿಳೆಯರು ಮತ್ತು ಪುರುಷರು ಬದುಕಿ ಉಳಿದಿರುವ ಬಗ್ಗೆ ಶುಕ್ರವಾರ ತಿಳಿದುಬಂದಿದ್ದು, ರಕ್ಷಣ ಸಿಬಂದಿ ಅವರನ್ನು ಪಾರು ಮಾಡಿದ್ದಾರೆ.