ವಿಜಯಪುರ (ದೇವನಹಳ್ಳಿ): ಹೋಬಳಿಯ ಕೋರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡುವನಹಳ್ಳಿ ಗ್ರಾಮದ ಸಮೀಪ ಇರುವ ತಮ್ಮ ಗುಡಿಸಲಗಳನ್ನು ತೆರವುಗೊಳಿಸಿದಂತೆ ಇಲ್ಲಿನ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಸರ್ವೇ ನಂ.36 ರಲ್ಲಿ ಇರುವ 2 ಎಕರೆ 30 ಗುಂಟೆ ಜಾರ ಸರ್ಕಾರದ್ದು, ಸರ್ಕಾರಿ ಜಾಗದಲ್ಲಿ ಅನಧಿಕೃತ ಗುಡಿಸಲು ನಿರ್ಮಿಸಿರುವುದು ಸರಿಯಿಲ್ಲ.
ಇಲ್ಲಿರುವ ಗುಡಿಸಿಲುಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿ ಎಚ್ಚರಿಕೆಯ ಫಲಕ ಅಳವಡಿಸಲು ಅಧಿಕಾರಿಗಳು ಮುಂದಾದರು.
ಇದರಿಂದ ಕೆರಳಿದ ಗುಡಿಸಲು ನಿವಾಸಿಗಳು ಗುಡಿಸಲುಗಳ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
‘ಯಾವುದೇ ಕಾರಣಕ್ಕೂ ಈ ಜಾಗದಿಂದ ಹೊರಗೆ ಹೋಗುವುದಿಲ್ಲ. ಮನೆ ನಿರ್ಮಾಣ ಮಾಡಿಕೊಳ್ಳಲು ಜಾಗವಿಲ್ಲದೆ ಸರ್ಕಾರಿ ಗೋಮಾಳದಲ್ಲಿ ಗುಡಿಸಿಲು ಹಾಕಿಕೊಂಡಿದ್ದೇವೆ. ಈ ಭೂಮಿ ನಮ್ಮೂರಿಗೆ ಸೇರಿದ್ದು, ನಮಗಲ್ಲದೆ ಬೇರೆ ಇನ್ಯಾರಿಗೆ ಉಪಯೋಗವಾಗಬೇಕು?’ ಎಂದು ಪ್ರತಿಭಟನನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ 2022ರಿಂದ ಕಂದಾಯ ಇಲಾಖೆಯ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರಿಗೆ ನಿರಂತರವಾಗಿ ಮನವಿ ಸಲ್ಲಿಸಿದ್ದೇವೆ. ಯಾವ ಅಧಿಕಾರಿಗಳೂ ಬಂದಿಲ್ಲ. ಗುಡಿಸಿಲು ಹಾಕಿದ ನಂತರ ತೆರವುಗೊಳಿಸುವಂತೆ ಹೇಳುತ್ತಿದ್ದಾರೆ. ಇದು ನ್ಯಾಯಾ ಎಂದು ಪ್ರಶ್ನಿಸಿದರು.