ಬಾಗಲಕೋಟೆ: ರಾಜ್ಯದಲ್ಲಿ ಕೆಲವಾರಗಳಿಂದ ವರುಣನ ಆರ್ಭಟ ನಿಲ್ಲುತ್ತಲೇ ಇಲ್ಲ. ಈಗಾಗಲೇ ಕೆಲ ಜಿಲ್ಲೆಗಳು ವರುಣನ ಅಬ್ಬರಕ್ಕೆ ಜಲಾವೃತವಾಗಿದ್ದು, ಘಟಪ್ರಭಾ ನದಿ ಪ್ರವಾಹದಿಂದ, ಬಾಗಲಕೋಟೆಯ (Bagalkote) ಮುಧೋಳ ತಾಲೂಕಿನ ಮಿರ್ಜಿ ಗ್ರಾಮ ಸಂಪೂರ್ಣವಾಗಿ ಜಲಾವೃತವಾಗಿದೆ.
ಇನ್ನು ಈ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದ್ದರಿಂದ, ನೂರಾರು ಮನೆಗಳು ಜಲಾವೃತವಾಗಿ (Flood), ಈಗಾಗಲೇ ಕಾಳಜಿ ಕೇಂದ್ರಕ್ಕೆ ಜನರು ಸ್ಥಳಾಂತರವೂ ಆಗಿದ್ದಾರೆ.
ಮಳೆಯಬ್ಬರದಿಂದ ಮಿರ್ಜಿ ಗ್ರಾಮ ನದಿಯಂತಾಗಿದ್ದು, ಈಗಾಗಲೇ 70 ಕುಟುಂಬಗಳು ಮನೆಗೆ ಬೀಗ ಹಾಕಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಿದೆ. ಈ ವೇಳೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಸಂತ್ರಸ್ತರು ಪ್ರವಾಹದ ತೊಂದರೆ ನೆನೆದು ಕಣ್ಣೀರು ಹಾಕಿದ್ದಾರೆ.
ಪ್ರವಾಹದ ತೊಂದರೆ ನೆನೆದು ಕಣ್ಣೀರು ಹಾಕಿದ ವಿದ್ಯಾರ್ಥಿನಿ!
ಇನ್ನು ಕಾಳಜಿ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯೊಬ್ಬಳು ಪ್ರವಾಹದಿಂದ ಎದುರಿಸಿದ ತೊಂದರೆಯನ್ನು ನೆನೆದು ಕಣ್ಣೀರು ಹಾಕಿದ್ದಾಳೆ. ನಮ್ಮ ಒಂಬತ್ತು ಎಕರೆ ಕಬ್ಬು ಮುಳುಗಿ ಹಾಳಾಗ್ತಿದೆ, ಇದಕ್ಕಾಗಿ ತಂದೆ ಸಾಲವನ್ನೂ ಮಾಡಿದ್ದರು. ಇದೀಗ ಮನೆಯೂ ಸಂಪೂರ್ಣವಾಗಿ ಮುಳುಗಡೆಯಾಗಿದೆ. ನಾನು ಪದವಿ ಓದುತ್ತಿದ್ದೇನೆ, ಎಲ್ಲಾ ಪಠ್ಯ ಪುಸ್ತಕಗಳು, ನೋಟ್ ಬುಕ್ಗಳನ್ನು ಕಟ್ಟಿ ಮನೆಯ ಸಜ್ಜಾ ಮೇಲಿಟ್ಟಿದ್ದೇನೆ. ಆದರೆ ಈಗ ಅವೆಲ್ಲ ಮುಳುಗಡೆಯಾಗಿವೆ. ಕಾಲೇಜಿಗೆ ಕೂಡ ಹೋಗಲು ಆಗ್ತಿಲ್ಲ. ಪ್ರತಿ ಸಾರಿ ಪ್ರವಾಹ ಬಂದಾಗ ಇದೇ ಪರಿಸ್ಥತಿಯಾಗಿದೆ, ಇನ್ನು ಇದನ್ನ ಸರಿಪಡಿಸೋಕೆ ಸಾವಿರಾರು ರೂಪಾಯಿ ಖರ್ಚಾಗುತ್ತೆ, ಪ್ರವಾಹದಿಂದ ಎಲ್ಲಾ ನಷ್ಟವಾಗಿದೆ. ನಮ್ಮ ಗೋಳಾಟ ನಿಲ್ತಿಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದಾಳೆ.