ಚಿತ್ರದುರ್ಗ: ಶಸ್ತ್ರ ಚಿಕಿತ್ಸೆಗಾಗಿ ಚಿತ್ರದುರ್ಗದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಂತ ರೋಗಿಯೊಬ್ಬರಿಗೆ ಜನರಲ್ ಸರ್ಜನ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಈ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜನರಲ್ ಸರ್ಜನ್ ಡಾ.ಸಾಲಿ ಮಂಜಪ್ಪ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಅದರಲ್ಲಿ ಚಂದ್ರಶೇಖರ್ ಬಿನ್ ಕೃಷ್ಣಪ್ಪ ರವರು ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಇಲ್ಲಿಗೆ ಚಿಕಿತ್ಸೆಯ ಸಲುವಾಗಿ ದಿನಾಂಕ 05-07-2024ರಂದು ಹೋದ ಸಂದರ್ಭದಲ್ಲಿ ಆಸ್ಪತ್ರೆಯ ಕರ್ತವ್ಯದ ಮೇಲಿದ್ದ ವೈದ್ಯರಾದ ಡಾ|| ಸಾಲಿ ಮಂಜಪ್ಪ, ಜನರಲ್ ಸರ್ಜನ್, ಜಿಲ್ಲಾ ಆಸ್ಪತ್ರೆ, ಚಿತ್ರದುರ್ಗ ಜಿಲ್ಲೆ ಇವರು ಸದರಿಯವರನ್ನು ಹೊರರೋಗಿಯಾಗಿ ಪರೀಕ್ಷಿಸಿದ ನಂತರ ಶಸ್ತ್ರಚಿಕಿತ್ಸೆಯ ಸಲುವಾಗಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ದಿನಾಂಕ 06-07-2024ರಂದು ಸದರಿ ರೋಗಿಗೆ ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿ ಶಸ್ತ್ರ ಚಿಕಿತ್ಸೆ ಕೊಠಡಿಗೆ ರೋಗಿಯು ಹೋದಾಗ ರೋಗಿಯ ಸಂಬಂಧಿಕರ ಜೊತೆಗೆ ವೈದ್ಯರು ಸಂಭಾಷಣೆ ನಡೆಸಿ ಹಣ ಕೇಳಿ ಪಡೆದಿರುವುದು ವಿಡಿಯೋ ಚಿತ್ರೀಕರಣಗೊಂಡು ಮಾಧ್ಯಮದಲ್ಲಿ ಪುಸಾರವಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಜಿಲ್ಲಾ ಶಸ್ತ್ರ ಚಿಕಿತ್ಸಕರು ದಿನಾಂಕ 22-07-2024ರಂದು ಕಾರಣ ಕೇಳಿ ನೋಟೀಸ್ನ್ನು ವೈದ್ಯರಿಗೆ ಜಾರಿ ಮಾಡಿದ್ದು, ವೈದ್ಯರಿಂದ ವಿವರಣೆ ಪಡೆದು ಪ್ರಕರಣದ ಕುರಿತಾದ ವರದಿಯನ್ನು ಉಲ್ಲೇಖಿತ ಪತ್ರದಲ್ಲಿ ಸಲ್ಲಿಸಿರುತ್ತಾರೆ ಎಂದಿದ್ದಾರೆ.