ಬೈಲಹೊಂಗಲ: ಸಮೀಪದ ಮಾಟೊಳ್ಳಿ, ಮಲ್ಲೂರ, ಹೊಸೂರ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆಗಳು ಶನಿವಾರ ಪ್ರತ್ಯಕ್ಷವಾಗಿವೆ.
ಖಾನಾಪೂರ ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಗೆ ಮಲಪ್ರಭಾ ನದಿಯ ಒಡಲು ದಿನೇ, ದಿನೇ ಹೆಚ್ಚುತ್ತಿದೆ. ಹರಿಯುವ ನದಿಯ ನೀರಿನಲ್ಲಿ ಸರಾಗ ಹರಿದು ಬರುತ್ತಿರುವ ಬೃಹತ್ ಗಾತ್ರದ ಮೊಸಳೆಗಳು ನದಿ ಪಾತ್ರದ ಗ್ರಾಮಸ್ಥರಲ್ಲಿ, ರೈತರಲ್ಲಿ ಆತಂಕ ಉಂಟು ಮಾಡಿವೆ.

ನದಿಯ ದಂಡೆಯ ಮೇಲೆ ಆಗಾಗ ಕಾಣಿಸಿಕೊಳ್ಳುತ್ತಿರುವ ಬೃಹತ್ ಗಾತ್ರದ ಮೊಸಳೆಗಳನ್ನು ಯುವಕರು ಮೊಬೈಲ್ ಕ್ಯಾಮೆರಾಗಳಲ್ಲಿ ವಿಡಿಯೋ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುತ್ತಿದ್ದಾರೆ.
ಅಧಿಕಾರಿಗಳು ನದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊಸಳೆಗಳನ್ನು ಸೆರೆ ಹಿಡಿದು ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ತಹಶೀಲ್ದಾರ್ ಹನುಮಂತ ಶಿರಹಟ್ಟಿ, ಮುಖ್ಯಾಧಿಕಾರಿ ವಿರೇಶ ಹಸಬಿ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ನದಿ ಪಾತ್ರದ ಗ್ರಾಮಸ್ಥರು, ರೈತರು ಜಾಗೃತಿ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
Laxmi News 24×7