ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಿಲ್ಲೆಯ ಜಲಾನಯನ ಪ್ರದೇಶಗಳಲ್ಲಿ ಶನಿವಾರ ಮಳೆ ಅಬ್ಬರ ತುಸು ತಗ್ಗಿದೆ. ಅಣೆಕಟ್ಟೆಗಳಿಂದ ನಿರಂತರ ನೀರು ಹರಿಸುತ್ತಿರುವ ಕಾರಣ, ಜಿಲ್ಲೆಯ 41 ಸೇತುವೆಗಳು ಇನ್ನೂ ನೀರಿನಲ್ಲಿ ಮುಳುಗಿವೆ. ಅಂದಾಜು 700ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಹುಕ್ಕೇರಿ ತಾಲ್ಲೂಕಿನ ಹೆಬ್ಬಾಳ ಬಳಿ ರಾಷ್ಟ್ರೀಯ ಹೆದ್ದಾರಿ-48ರ ಮೇಲೆ ಅಪಾರ ಪ್ರಮಾಣ ನೀರು ಹರಿಯಿತು. ಇದರಿಂದ ಕೆಲ ಸಮಯ ಸಂಚಾರ ಬಂದ್ ಆಯಿತು. ಹೆದ್ದಾರಿ ಮೇಲೆಯೇ ಮಣ್ಣು-ಕಲ್ಲು ಸುರಿದು ಅದರ ಮೇಲೆ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಲಾಯಿತು.
ಹಿಡಕಲ್ ಜಲಾಶಯದಿಂದ 44 ಸಾವಿರ ಕ್ಯುಸೆಕ್, ಹಿರಣ್ಣಕೇಶಿ ನದಿಯಿಂದ 24 ಸಾವಿರ ಕ್ಯುಸೆಕ್, ಶಿರೂರು ಜಲಾಶಯದಿಂದ 8,000 ಕ್ಯುಸೆಕ್, ಬಳ್ಳಾರಿ ನಾಲಾದಿಂದ 3,000 ಕ್ಯುಸೆಕ್ ಸೇರಿ ಒಟ್ಟು 79 ಸಾವಿರ ಕ್ಯುಸೆಕ್ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿದೆ. ಇದರಿಂದ ಗೋಕಾಕ ನಗರದ 150 ಮನೆಗಳು ಹಾಗೂ 150 ಮಳಿಗೆಗಳು ನೀರಿನಿಂದ ಆವೃತವಾಗಿವೆ.