ಯಲಹಂಕ: ಆಧುನಿಕ ಸಮಾಜದಲ್ಲಿ ವಿಜ್ಞಾನ ಮತ್ತು ಗಣಿತಕ್ಕೆ ನೀಡುತ್ತಿರುವ ಮಾನ್ಯತೆ ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ದೊರಕುತ್ತಿಲ್ಲ ಎಂದು ಡಾ. ನಾ. ಸೋಮೇಶ್ವರ ಹೇಳಿದ್ದಾರೆ.
ಗುರುಪೂರ್ಣಿಮೆ ಪ್ರಯುಕ್ತ ಸಂಸ್ಕಾರ ಭಾರತಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇತಿಹಾಸತಜ್ಞ, ಶಾಸನ ಸಂಶೋಧಕ ಕೆ.ಆರ್.
ನರಸಿಂಹನ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಶಾಸನ ಸಂಶೋಧನೆಗೆ ನರಸಿಂಹನ್ ನೀಡಿರುವ ಕೊಡುಗೆ ಅಪಾರ. ಒಂದು ಸಂಸ್ಥೆ, ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕೆಲಸವನ್ನು ಅವರ ತಂಡ ಮಾಡುತ್ತಿರುವುದು ಶ್ಲಾಘನೀಯ ಎಂದರು.
120ಕ್ಕೂ ಹೆಚ್ಚು ಶಾಸನಗಳನ್ನು ಪತ್ತೆ ಮಾಡಿ ಅವುಗಳನ್ನು ಸಂರಕ್ಷಿಸಿದ್ದಾರೆ. ಮಣ್ಣಿನಲ್ಲಿ ಹುದುಗಿಹೋಗುವ ಸ್ಥಿತಿಯಲ್ಲಿದ್ದ ನಾಡಿನ ಭವ್ಯ ಪರಂಪರೆ, ರಾಜ-ಮಹಾರಾಜರ ಕಾಲದ ಗತವೈಭವ ಸಾರುವ ಹಲವು ಶಿಲಾಶಾಸನಗಳನ್ನು ಪತ್ತೆಹಚ್ಚಿ ಪರಿಚಯಿಸುವ ಮಹತ್ವದ ಕಾರ್ಯವನ್ನು ನರಸಿಂಹನ್ ತಂಡ ಮಾಡಿದೆ ಎಂದು ಪ್ರಶಂಸಿಸಿದರು.
ಕೆ.ಆರ್. ನರಸಿಂಹನ್ ಮಾತನಾಡಿ, ಗುರುಪೂರ್ಣಿಮೆಯ ಈ ಶುಭದಿನದಂದು ನನ್ನ ಸೇವೆಯನ್ನು ಗುರುತಿಸಿ ಸಂಸ್ಕಾರ ಭಾರತಿಯವರು ನನ್ನ ಮನೆಯಂಗಳಕ್ಕೆ ಬಂದು ಸನ್ಮಾನಿಸುತ್ತಿರುವುದು ಸಂತೋಷ ಉಂಟುಮಾಡಿದೆ. ಶಾಸನ ಸಂಶೋಧನೆಯ ನನ್ನ ಈ ಸೇವೆಯಲ್ಲಿ ಧನಪಾಲ್ ಪಾತ್ರ ಮಹತ್ವದ್ದು ಎಂದರು.