ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ನಿಂತು ಹೋಗಿ ಇಂದಿಗೆ 11 ದಿನ ಪೂರ್ಣಗೊಂಡಿದೆ. ಬ್ರಿಟಿಷ್ ಕಾಲದಿಂದ ಹಿಡಿದು, ಶಿರೂರು ಮಣ್ಣು ಕುಸಿತದ ಘಟನೆ ನಡೆವ ತನಕ ಈ ಹೆದ್ದಾರಿ ಬಂದ್ ಆದ ಉದಾಹರಣೆಗಳಿಲ್ಲ. ಕೊಂಕಣ ಸೀಮೆ, ಪಶ್ಚಿಮ ಘಟ್ಟಗಳ ಸಾಲಿನ ಕರಾವಳಿಯಲ್ಲಿ ಮುಂಬಯಿ ಪ್ರಾಂತ, ಗೋವಾ, ಕರಾವಳಿ ಕರ್ನಾಟಕ, ಕೇರಳವೂ ಸೇರಿದಂತೆ ನಾಲ್ಕು ರಾಜ್ಯಗಳನ್ನು ಬೆಸೆಯುವ ಈ ರಾಷ್ಟ್ರೀಯ ಹೆದ್ದಾರಿ ಮೊದಲು ಎನ್ ಎಚ್ 17 ಆಗಿತ್ತು.
ದ್ವಿಪಥದ ಹೆದ್ದಾರಿ ಚತುಷ್ಪಥಕ್ಕೆ ಅಗಲೀಕರಣದ ಯೋಜನೆಗೆ ಅನುದಾನ ದೊರೆತ ನಂತರ 2014 ರಲ್ಲಿ ಕಾಮಗಾರಿ ಪ್ರಾರಂಭವಾಯಿತು. ಈ ಯೋಜನೆ ಕಾರವಾರದಿಂದ ಭಟ್ಕಳ ತನಕ ಇನ್ನೂ ಆರು ಕಡೆ ಭೂ ಸ್ವಾಧೀನ ಕೆಲಸ ಬಾಕಿಯಿದೆ. ಕಾಮಗಾರಿ ಸಹ ಶೇ.35 ರಷ್ಟು ಹಾಗೆ ಉಳಿದಿದೆ. ಈತನ್ಮಧ್ಯೆ ಶಿರೂರು ಬಳಿ ಗುಡ್ಡ ಕುಸಿದಾಗ ಇಡೀ ಬದುಕೇ ಕುಸಿದು ಬಿತ್ತು. ಹೆದ್ದಾರಿ ಬಂದ್ ಆದಾಗ ಗೋವಾ, ಕಾರವಾರ ಮತ್ತು ಮಂಗಳೂರು ಮಧ್ಯೆ ದೊಡ್ಡ ಕಂದರ ಸೃಷ್ಟಿಯಾಗಿದೆ. ಇದೀಗ ಈ ಹೆದ್ದಾರಿ ಸಂಚಾರ ಪುನಃ ಪ್ರಾರಂಭಿಸುವಂತೆ ಸರ್ಕಾರದ ಮೇಲೆ, ಜಿಲ್ಲಾಡಳಿತದ ಮೇಲೆ ಒತ್ತಡ ಬರುತ್ತಿವೆ. ಆದದ್ದು ಆಗಿ ಹೋಗಿದೆ. ಸುರಕ್ಷಿತಾ ಕ್ರಮ ಬೇಗ ಕೈಗೊಳ್ಳಿ ಎಂಬ ಮಾತು ಕೇಳಿ ಬಂದಿದೆ.