2024: ಇಂದು (ಜುಲೈ 23) ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಮೂಲಕ ಅವರು ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ದಾಖಲೆಯನ್ನು ಮುಡಿಗೇರಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಬಜೆಟ್ನಲ್ಲಿ ಹಲವರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ಹಾಗಾದರೆ ಪ್ರಮುಖವಾಗಿ ಕರ್ನಾಟಕದ ನಿರೀಕ್ಷೆಗಳೇನು ಎಂದು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ವಿವಿಧ ಹಂತಗಳಲ್ಲಿರುವ ನೀರಾವರಿ ಯೋಜನೆಗಳಿಗೆ ಅನುಮತಿ ಮತ್ತು ಅನುದಾನ, ಹೊಸ ಮಾರ್ಗಗಳ ನಿರ್ಮಾಣ ಮತ್ತು ಇರುವ ಮಾರ್ಗಗಳ ಮೇಲ್ದರ್ಜೆಗೆ ಕ್ರಮ, ಬೆಂಗಳೂರಿನ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಇರುವ ಉಪನಗರ ರೈಲು ಹಾಗೂ ವರ್ತುಲ ರೈಲು ಯೋಜನೆ ಹಲವು ನಿರೀಕ್ಷೆಗಳಿವೆ. ಇನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಮೇಲೆ ಕರ್ನಾಟಕ ರಾಜ್ಯ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದೆ.
ರೈಲ್ವೇ ಯೋಜನೆ: ಮಂಗಳೂರಿನ ರೈಲ್ವೇ ಮಾರ್ಗಗಳು ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ ಮತ್ತು ನೈಋತ್ಯ ರೈಲ್ವೇಗಳಲ್ಲಿ ಹಂಚಿ ಹೋಗಿವೆ. ಇವುಗಳನ್ನು ಒಂದೆಡೆಗೆ ತಂದು ಮಂಗಳೂರು ರೈಲ್ವೇ ವಿಭಾಗವನ್ನು ಸೃಷ್ಟಿಸಬೇಕು. ಇಲ್ಲವೇ ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೇಗೆ ಸೇರಿಸಬೇಕೆಂಬ ನಿರೀಕ್ಷೆಗಳು ಈ ಬಜೆಟ್ನಲ್ಲಿ ಪ್ರಸ್ತಾವ ಆಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.
ಇನ್ನು ಬೆಂಗಳೂರು ವಿಭಾಗದಂತೆ ಕಲಬುರಗಿಯನ್ನೂ ವಿಭಾಗವಾಗಿ ಘೋಷಿಸಿ, ಕಾರ್ಯನಿರ್ವಹಣೆಗೆ ಚಾಲನೆ ನೀಡಬೇಕು. ಬೆಂಗಳೂರು- ಮೀರಜ್ ನಡುವೆ ವಿದ್ಯುದೀಕರಣಗೊಳ್ಳಬೇಕಿದೆ. ಬೆಂಗಳೂರು-ಹಾಸನ ನಡುವೆ ವಿದ್ಯುದ್ದೀಕರಣಗೊಂದೆ ಆದರೂ, ಹಾಸನ ಯಾರ್ಡ್ ಇನ್ನೂ ಬಾಕಿಯಿದೆ.