ಬೆಂಗಳೂರು: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಜಾರಿಗೆ ತಾತ್ಕಾಲಿಕ ತಡೆ ನೀಡಿರುವ ರಾಜ್ಯ ಸರಕಾರ ಈಗ ಇಕ್ಕಟ್ಟಿಗೆ ಸಿಲುಕಿದೆ. ಒಂದು ವೇಳೆ ಮಸೂದೆ ಜಾರಿಗೆ ಮುಂದಾದರೆ ಉದ್ಯಮ ವಲಯಗಳ ವಿರೋಧ ಎದುರಿಸಬೇಕಾಗುತ್ತದೆ. ಜಾರಿ ಮಾಡ ದಿದ್ದರೆ ಸರಕಾರ ಕನ್ನಡಿಗರ ಪರ ಇಲ್ಲ ಎಂಬ ಹಣೆಪಟ್ಟಿಗೆ ಒಳಗಾಗಬೇಕಾಗುತ್ತದೆ.
ಒಂದರ್ಥದಲ್ಲಿ ನುಂಗಿದರೆ ಕಷ್ಟ, ನುಂಗದಿದ್ದರೆ ಇನ್ನೂ ಕಷ್ಟ ಎಂಬುದು ಸರಕಾರದ ಈಗಿನ ಪರಿಸ್ಥಿತಿಯಾಗಿದೆ.
ಕನ್ನಡಿಗರಿಗೆ ಮೀಸಲು ಮಸೂದೆ ಇನ್ನೇನು ಈ ಅಧಿವೇಶನದಲ್ಲೇ ಮಂಡನೆಯಾಗುತ್ತದೆ ಎಂಬ ನಿರೀಕ್ಷೆ ಇತ್ತು. ಉದ್ಯಮ ವಲಯದಿಂದ ವ್ಯಕ್ತವಾದ ಭಾರೀ ಆಕ್ರೋಶದ ಜತೆಗೆ ಸಚಿವ ಸಂಪುಟದಲ್ಲೂ ಕಾಣಿಸಿಕೊಂಡ ಅಪಸ್ವರದಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕ ವಾಗಿ ಈ ಮಸೂದೆ ಮಂಡನೆಯನ್ನು ತಡೆಹಿಡಿಯಲಾಗಿದೆ, ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಹೇಳುವ ಮೂಲಕ ಹಾನಿ ನಿಯಂತ್ರಣ ಮಾಡಿದ್ದಾರೆ.
ಆದರೆ ಈ ಬೆಳವಣಿಗೆಗೆ ಕನ್ನಡಪರ ಸಂಘಟನೆಗಳಿಂದ ಸಾಕಷ್ಟು ಟೀಕೆಗಳನ್ನು ಸರಕಾರ ಎದುರಿಸುತ್ತಿದೆ.
ಅಧಿವೇಶನದಲ್ಲಿ ಮಸೂದೆ ಮಂಡಿಸದೆ ತಡೆ ಹಿಡಿದಿರುವ ಕ್ರಮ ಕನ್ನಡಿಗರು, ಕನ್ನಡಪರ ಸಂಘಟನೆ, ಹೋರಾಟಗಾರರಲ್ಲಿ ಸಾಕಷ್ಟು ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ಮತ ಪಡೆದು ಅಧಿಕಾರಕ್ಕೆ ಬಂದ ಸರಕಾರ ಉದ್ಯಮಿಗಳಿಗೆ ಹೆದರುವ ಪರಿಸ್ಥಿತಿ ಬಂತಲ್ಲ ಎಂಬ ಬೇಸರ ಕನ್ನಡಪರ ಹೋರಾಟಗಾರರದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಕನ್ನಡಿಗರ ಪರ ಎಂದು ಸಾಬೀತುಪಡಿಸಲು ಸಕಾಲ. ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಖಾಸಗಿ ಸಂಸ್ಥೆಗಳ ಒತ್ತಡಕ್ಕೆ ಸರಕಾರ ಮಣಿಯಬಾರದು ಎಂದು ರೈತಪರ ಸಂಘಟನೆಗಳ ಸಹಿತ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ. ಬ್ಲ್ಯಾಕ್ಮೇಲ್ ತಂತ್ರಕ್ಕೆ ಮಣಿದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂಬ ಎಚ್ಚರಿಕೆ ಸಂದೇಶವನ್ನು ಸರಕಾರಕ್ಕೆ ರವಾನಿಸಿವೆ.