ಬೆಳಗಾವಿ: ‘ಅಗ್ನಿಪಥ ಯೋಜನೆ ಕುರಿತಾಗಿ ಅವಹೇಳನಾಕಾರಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಕ್ಷಣವೇ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಕುಮಾರ ಹೀರೆಮಠ ಒತ್ತಾಯಿಸಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಜಾರಿಗೆ ತಂದ ಈ ಯೋಜನೆ ಆದರ್ಶ ಸೈನಿಕನನ್ನು ರೂಪಿಸುತ್ತದೆ.
ಬಹಳಷ್ಟು ಯುವಕ-ಯುವತಿಯರು ಇದರ ಲಾಭ ಪಡೆದಿದ್ದಾರೆ. ಆದರೆ, ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಹುಲ್ ಗಾಂಧಿ ಈ ಯೋಜನೆ ವಿರೋಧಿಸಬಾರದು. ಇದರ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದರು.
‘ಇದು ದೇಶದ ಸೇನಾ ವ್ಯವಸ್ಥೆಯನ್ನೇ ಬಲಪಡಿಸುವಂಥ ಯೋಜನೆ. 4 ವರ್ಷ ಅಗ್ನಿವೀರರಾಗಿ ಕೆಲಸ ಮಾಡಿದವರು ಆರ್ಥಿಕವಾಗಿ ಸದೃಢವಾಗಬಹುದು. ನಂತರ ಮೀಸಲಾತಿಯಡಿ ವಿವಿಧ ಇಲಾಖೆಗಳ ಸರ್ಕಾರಿ ಉದ್ಯೋಗ ಗಿಟ್ಟಿಸಬಹುದು. ಅಪಾಯದ ಸ್ಥಿತಿಯಲ್ಲಿದ್ದಾಗ ದೇಶದ ರಕ್ಷಣೆಗೆ ಅಣಿಯಾಗಬಹುದು’ ಎಂದು ತಿಳಿಸಿದರು.
ಮಾಜಿ ಸೈನಿಕರಾದ ರಮೇಶ ಚೌಗಲಾ, ಜಗದೀಶ ಪೂಜಾರಿ, ಲಕ್ಷ್ಮಣ ದಂಡಾಪುರಿ, ರಾಜೇಂದ್ರ ಹಲಗೆ, ಸಂಗಪ್ಪ ಮೇತ್ರಿ ಉಪಸ್ಥಿತರಿದ್ದರು.
Laxmi News 24×7