ಮುಡಾ ಹಗರಣ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂಟಿದ ಕಳಂಕವಷ್ಟೇ ಅಲ್ಲ, ಅವರ ಇಡಿ ವçಕ್ತಿತ್ವಕ್ಕೆ ಮೆತ್ತಿಕೊಂಡ ಕೆಸರು. ರಾಜ್ಯದ ಜನತೆಯ ಮುಂದೆ ಶುಭ್ರತೆಯ ಪೋಸು ನೀಡುತ್ತಿದ್ದ ಸಿದ್ದರಾಮಯ್ಯ ಈ ಬಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ರಾಜೀನಾಮೆ ಕೊಟ್ಟರೂ ಈ ಕಳಂಕಿತ ಚಾರಿತ್ರ್ಯದಿಂದ ಅವರಿಗೆ ಮುಕ್ತಿ ಸಿಗುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ ಅಭಿಪ್ರಾಯಪಟ್ಟಿದ್ದಾರೆ.
“ಉದಯವಾಣಿ’ಗೆ ನೀಡಿದ ನೇರಾನೇರ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಹತ್ತು-ಹದಿನೈದು ವರ್ಷದಿಂದ ಹಂತಹಂತವಾಗಿ ಹೊಂಚು ಹಾಕಿ ಸಿದ್ದರಾಮಯ್ಯ ಈ ಭೂಮಿ ಹೊಡೆದುಕೊಂಡಿದ್ದಾರೆ. ಈ ಕಲಿಯುಗದಲ್ಲಿ ಯಾರಾದರೂ ಅರಿಸಿನ-ಕುಂಕುಮಕ್ಕೆ ಮೂರು ಎಕ್ರೆ ದಾನ ಕೊಡುತ್ತಾರೆ ಎಂದರೆ ನಂಬಲು ಸಾಧ್ಯವೇನ್ರೀ ? ಸಿದ್ದರಾಮಯ್ಯನವರೇ ನಿಮ್ಮ ರಾಜಕಾರಣದ ಸಂಧ್ಯಾ ಕಾಲದಲ್ಲಿ ಕಳಂಕ ಅಂಟಿದೆ. ರಾಜ್ಯದ ಜನತೆಯ ದಾರಿ ತಪ್ಪಿಸದೇ ಖುರ್ಚಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.