ಮುಧೋಳ ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ
ಮುಧೋಳ: ತಾಲೂಕಿನ ಕಿಶೋರಿ ಭಾಗದಲ್ಲಿ ಚಿರತೆ ಸಂಚಲನ ಹುಟ್ಟಿಸಿದ್ದು ಜನರು ಮನೆಯಿಂದ ಹೊರಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಕಳೆದ ಹಲವು ದಿನಗಳಿಂದ ಜಮೀನುಗಳಲ್ಲಿ ಪ್ರತ್ಯಕ್ಷವಾಗಿರುವ ಚಿರತೆ ಮೇಯಲು ಬಿಟ್ಟ ಎಮ್ಮೆ, ಕರುಗಾಲ ಮೇಲೆ ದಾಳಿ ನಡೆಸಿದ್ದು ಚಿರತೆ ಕಾಟದಿಂದ ಗ್ರಾಮದ ಜನ ರೋಸಿ ಹೋಗಿದ್ದಾರೆ.
ಯಡಹಳ್ಳಿ ಚಿಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ಕಿಶೋರಿ ಗ್ರಾಮದ ಜಮೀನುಗಳಲ್ಲಿ ಓಡಾಡುತ್ತಿರುವ ಚಿರತೆ ನಾಯಿಯೊಂದನ್ನು ಕೊಂದು ತಿಂದಿದ್ದು, ಅರ್ಧ ಕಳೇಬರವನ್ನು ಕಬ್ಬಿನ ಜಮೀನಿನಲ್ಲಿ ಬಿಟ್ಟು ಪರಾರಿಯಾಗಿದೆ. ಚಿರತೆ ಕಾಟದಿಂದ ಕಂಗಾಲಾಗಿರುವ ಕಿಶೋರಿ ಹಾಗೂ ಸುತ್ತಲಿನ ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ.
ಚಿರತೆ ಸೆರೆಯಲು ಮುಂದಾಗಿರುವ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಕಿಶೋರಿ-ಮೆಳ್ಳಿಗೇರಿ ಗ್ರಾಮದ ಸರಹದ್ದಿನಲ್ಲಿ ಶುಕ್ರವಾರದಿಂದ ಕೋಂಬಿಂಗ್ ಆರಂಭಿಸಿದ್ದಾರೆ ಆದರೆ ಇದುವರೆಗೆ ಚಿರತೆ ಮಾತ್ರ ಪತ್ತೆಯಾಗಿಲ್ಲ.