ಬೆಳಗಾವಿ: ‘7ಸಿ ಸೆಕ್ಷನ್ ಯೋಜನೆಯಡಿ ಎಸ್ಸಿಪಿ, ಟಿಎಸ್ಪಿ ಯೋಜನೆ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು ನಿಜ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್ಟಿಪಿ, ಟಿಎಸ್ಪಿ ಕಾರ್ಯಕ್ರಮ ದೇಶದಲ್ಲಿಯೇ ಅತ್ಯುತ್ತಮವಾದದ್ದು. ತಳಮಟ್ಟದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯೇ ಮಾಡಿದ್ದರು. ಅದೇ ರೀತಿ 7ಸಿ, 7ಡಿ ಸೆಕ್ಷನ್ಗಳನ್ನು ಹಾಕಿ ಕಾನೂನಾತ್ಮಕಗೊಳಿಸಿದ್ದಾರೆ. ವಿಶೇಷ ಸಂದರ್ಭದಲ್ಲಿ ಉತ್ತಮ ಕಾರ್ಯಗಳಿಗೆ ಆ ಅನುದಾನ ಬಳಸಬಹುದು ಎಂಬುದನ್ನು ಸೆಕ್ಷನ್ 7ಸಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು.
‘ಹೆಣ್ಣು ಮಕ್ಕಳು ಸದೃಢವಾಗಲಿ ಎಂಬ ಉದ್ದೇಶದಿಂದ ಗ್ಯಾರಂಟಿಗಳಿಗೆ ಈ ಅನುದಾನ ಬಳಸಿಕೊಂಡಿದೆ. ಆದರೆ, ಈ ಅನುದಾನವನ್ನು ಎಸ್ಸಿ, ಎಸ್ಟಿ ಸಮುದಾಯಗಳ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.