ಬೆಂಗಳೂರು ;ಪೊಲೀಸ್ ಕಾನ್ಸ್ಟೆಬಲ್ಗಳ ಅಂತರ ಜಿಲ್ಲಾ ವರ್ಗಾವಣೆ ನಿಯಮ ತಿದ್ದುಪಡಿಗೆ ರಾಜ್ಯ ಸರ್ಕಾರ ಮುಂದಾಗಿದೆ. ವರ್ಗಾವಣೆ ಬಯಸುವವರಿಗೆ ಈಗಿರುವ 7 ವರ್ಷ ಸೇವಾವಧಿ ಪೂರ್ಣಗೊಳಿಸಬೇಕೆಂಬ ನಿಯಮವನ್ನು 10 ವರ್ಷ ಅವಧಿಗೆ ಹೆಚ್ಚಳ ಮಾಡುವ ಸಿದ್ಧತೆ ನಡೆಸಿರುವ ಮಾಹಿತಿ ಹಿನ್ನೆಲೆಯಲ್ಲಿ ನಾಲ್ಕು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿರುವ ಪೊಲೀಸ್ ಕಾನ್ಸ್ಟೆಬಲ್ಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕುಟುಂಬ ಸಮೇತ ಪ್ರತಿಭಟನೆಗಿಳಿಯುವ ಎಚ್ಚರಿಕೆ ಕೊಟ್ಟಿದ್ದಾರೆ.
ಮೊದಲಿಗೆ ಎರಡೂವರೆ ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಿದರೆ ಕಾನ್ಸ್ಟೆಬಲ್ಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ನಂತರ 3 ವರ್ಷ ಅವಧಿಗೆ ಏರಿಸಲಾಯಿತು. 2019ರಲ್ಲಿ 5 ವರ್ಷ ಸೇವಾವಧಿ ಪೂರ್ಣಗೊಳಿಸಿದ ಸಿಬ್ಬಂದಿಯನ್ನಷ್ಟೇ ಅಂತರ ಜಿಲ್ಲಾ ವರ್ಗಾವಣೆಗೆ ಪರಿಗಣಿಸುವುದಾಗಿ ಆದೇಶ ಹೊರಡಿಸಲಾಯಿತು. ಅದಾದ ಕೆಲವೇ ದಿನಗಳಿಗೆ ಪುನಃ 7 ವರ್ಷದ ಅವಧಿಗೆ ಏರಿಕೆ ಮಾಡಿ ಸರ್ಕಾರ ಆದೇಶಿಸಿತು.
ಪದೇಪದೆ ಅವಧಿ ಹೆಚ್ಚಳದಿಂದ ವರ್ಗಾವಣೆ ಭಾಗ್ಯ ಸಿಗದೆ ಪೊಲೀಸ್ ಕಾನ್ಸ್ಟೆಬಲ್ಗಳು ರೋಸಿದ್ದಾರೆ. ಪ್ರವೀಣ್ ಸೂದ್ ಡಿಜಿಪಿಯಾಗಿದ್ದಾಗ ಪೊಲೀಸರ ವರ್ಗಾವಣೆ ಅನುಕೂಲಕ್ಕಾಗಿಯೇ ಕೆಎಸ್ಪಿ ಪೋರ್ಟಲ್ ಅಭಿವೃದ್ಧಿಪಡಿಸಿ, ಅನುಷ್ಠಾನಕ್ಕೆ ತರಲಾಗಿತ್ತು.
ಪೋರ್ಟಲ್ನಲ್ಲಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ಎಂಬ ನಿಯಮವನ್ನು ಪೊಲೀಸ್ ಇಲಾಖೆಯೇ ಜಾರಿಗೆ ತರಲಾಗಿತ್ತು. ಆದರೆ, ಪೊರ್ಟಲ್ ನಿಯಮದ ಪ್ರಕಾರವೇ ವರ್ಗಾವಣೆಗೆ ಅರ್ಜಿ ಸಲ್ಲಿಸಿ ಒಂದೂವರೆ ವರ್ಷದಿಂದ ಕಾನ್ಸ್ಟೆಬಲ್ಗಳು ಕಾಯುತ್ತಿದ್ದಾರೆ.
ಆದರೀಗ ವರ್ಗಾವಣೆ ಅವಧಿಯನ್ನು 10 ವರ್ಷಕ್ಕೆ ಹೆಚ್ಚಳ ಮಾಡಬೇಕು ಎಂದು ಡಿಜಿಪಿ ಕಚೇರಿಯಿಂದ ಗೃಹಸಚಿವರ ಕಚೇರಿಗೆ ಕಡತ ರವಾನೆಯಾಗಿದೆ. ಸರ್ಕಾರವೂ ನಿಯಮಕ್ಕೆ ತಿದ್ದುಪಡಿ ತಂದು ಏರಿಕೆ ಮಾಡಲು ನಿರ್ಧರಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗೃಹಸಚಿವರು ಕಾನ್ಸ್ಟೆಬಲ್ಗಳ ವರ್ಗಾವಣೆ ಹಾಗೂ ಪತಿ-ಪತ್ನಿ ಪ್ರಕರಣಗಳಿಗೆ ವರ್ಗಾವಣೆ ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಸದ್ಯ ಯಾವುದೇ ರೀತಿ ತಿದ್ದುಪಡಿ ಮಾಡದೆ ಈಗಾಗಲೇ ರೂಪಿಸಿರುವ ಕೆಎಸ್ಪಿ ಪೋರ್ಟಲ್ ಪ್ರಕಾರವೇ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಕಾನ್ಸ್ಟೆಬಲ್ಗಳು ಒತ್ತಾಯಿಸಿದ್ದಾರೆ.