ಬೆಳಗಾವಿ: ಕರ್ನಾಟಕ- ಗೋವಾ ಗಡಿಯ ಚೋರ್ಲಾ ಘಾಟ್ಗೆ ಭಾನುವಾರ ಭೇಟಿ ನೀಡಿದ ಕೇಂದ್ರದ ‘ಪ್ರವಾಹ’ ತಂಡದ ಸದಸ್ಯರು, ಮಳೆ ನಡುವೆಯೇ ಮಹದಾಯಿ ಜಲಾನಯನ ಪ್ರದೇಶ ವೀಕ್ಷಿಸಿದರು.
ಚೋರ್ಲಾ ಘಾಟ್ ಮತ್ತು ಹರತಾಳ ನಾಲೆ ವೀಕ್ಷಿಸಿದ ಅಧಿಕಾರಿಗಳಿಗೆ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
‘ಅನುಮತಿ ಇಲ್ಲದೆ ಕರ್ನಾಟಕ ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಿದೆ’ ಎನ್ನುವ ಗೋವಾ ಸರ್ಕಾರದ ಆರೋಪದ ಹಿನ್ನೆಲೆಯಲ್ಲಿ ಈ ಸದಸ್ಯರು ಪರಿಶೀಲನೆ ನಡೆಸಿದರು.
ಆದರೆ, ಇಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಕೇಂದ್ರ ತಂಡಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.
ನಂತರ ಕಣಕುಂಬಿ ಅತಿಥಿ ಗೃಹದಲ್ಲಿ ಸಭೆ ನಡೆಸಿದ ಕೇಂದ್ರದ ‘ಪ್ರವಾಹ’ ತಂಡಕ್ಕೆ ರಾಜ್ಯದ ಅಧಿಕಾರಿಗಳು ಕಳಸಾ-ಬಂಡೂರಿ ಯೋಜನೆ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.