ಬೈಲಹೊಂಗಲ: ಪಟ್ಟಣದ ಹುಡೇದ ಗಲ್ಲಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಬಾವಿ ಅಭಿವೃದ್ಧಿಗೆ 50 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಕ್ರೀಯಾಯೋಜನೆ ರೂಪಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ಐಕ್ಯ ಸ್ಥಳ ಹಾಗೂ ಹುಡೇದ ಗಲ್ಲಿ ಹತ್ತಿರ ಇರುವ ವೀರರಾಣಿ ಕಿತ್ತೂರು ಚನ್ನಮ್ಮನ ಸ್ಮಾರಕ ಭಾವಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
‘ಕಿತ್ತೂರು ಚನ್ನಮ್ಮ ಸ್ಮಾರಕ ಬಾವಿ ಅಭಿವೃದ್ದಿಗೆ ಶಾಸಕರು ವಿಶೇಷ ಕಾಳಜಿವಹಿಸಿದ್ದು, ಸರ್ಕಾರದಿಂದ ಅನುದಾನ ಒದಗಿಸಿ ಅಭಿವೃದ್ದಿಗೆ ಮುಂದಾಗಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಕಿತ್ತೂರು ಚನ್ನಮ್ಮನ ಸ್ಮಾರಕಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ’ ಎಂದರು.
‘ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ಪರಾಕ್ರಮವನ್ನು ಯುವ ಪಿಳೀಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿ ಪಡಿಸಿ, ಸುಂದರ ತಾಣಗಳನ್ನಾಗಿ ಮಾಡಲು ಸರಕಾರ ವಿಶೇಷ ಆಸಕ್ತಿವಹಿಸಿದೆ’ ಎಂದರು.