ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು. ಈ ವಿಷಯ ಈಗ ಬಹಳ ಚರ್ಚೆಯಲ್ಲಿದೆ ಎಂದು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ.
ಈಗ ಯಾವುದೇ ಚುನಾವಣೆ ಇಲ್ಲ. ಆದರೆ ಮತಗಳನ್ನು ತಂದುಕೊಡುವ ಹಾಗೂ ಪಕ್ಷವನ್ನು ಸಂಘಟಿಸುವವರಿಗೆ ಈ ಹುದ್ದೆ ನೀಡಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನು ಕೇಳಿಲ್ಲ. ಅದೇನೇ ಇದ್ದರೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದರು.
ಮುಂದೆ ನಡೆಯುವ ಕ್ಷೇತ್ರಗಳ ಪುನರ್ ವಿಂಗಡಣೆ ಸಮಯದಲ್ಲಿ ರಾಯಬಾಗ ಹಾಗೂ ಕುಡಚಿ ಕ್ಷೇತ್ರಗಳ ಮೀಸಲಾತಿ ಬದಲಾಗಲಿವೆ. ಅವಕಾಶ ಸಿಕ್ಕರೆ ನಾವೂ ಸಹ ಅಲ್ಲಿ ಟವಲ್ ಹಾಕುತ್ತೇವೆ. ಇದಕ್ಕೆ ಪೂರಕವಾಗಿ ರಾಯಬಾಯ ತಾಲೂಕಿನ ಅಳಗವಾಡಿಯಲ್ಲಿ ಮನೆ ನೋಡುತ್ತಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.