ಬೆಂಗಳೂರು, ಜೂನ್ 30: ಅಬಕಾರಿ ಇಲಾಖೆ (Excise Department) ಬೆಂಗಳೂರು ವ್ಯಾಪ್ತಿಯ ಎಂಟು ಜನ ಉಪ ಆಯಕ್ತರ ಪೈಕಿ ನಾಲ್ವರನ್ನು ತಮ್ಮದೇ ಜಾತಿಯ ಅಧಿಕಾರಿಗಳನ್ನು ನೇಮಿಸಿದ್ದನ್ನು ರಾಜ್ಯ ಬಿಜೆಪಿ (BJP) ವಿರೋಧಿಸಿದ್ದು,
ರಾಜ್ಯ ಸರ್ಕಾರದ ವಿರುದ್ಧ ಸ್ವಜನ ಪಕ್ಷಪಾತದ ಗಂಭೀರ ಆರೋಪ ಮಾಡಿದೆ. ಅಬಕಾರಿ ಇಲಾಖೆಯಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ಒಂದೇ ಸಮುದಾಯದ ನಾಲ್ವರಿಗೆ ಸ್ಥಾನಮಾನ ನೀಡಲಾಗಿದೆ.
ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ಕೆಲ ಸಚಿವರ ಆಪ್ತರಿಗೆ ಮಣೆ ಹಾಕಲಾಗಿದೆ. ಈ ಹಿಂದೆಯೂ ರಾಜ್ಯ ಸರ್ಕಾರದ (Karnataka Government) ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಪತ್ರ ಬರೆಯಲಿದ್ದಾರೆ.ಅಬಕಾರಿ ಇಲಾಖೆ ಒಂದೇ ಅಲ್ಲ ಇನ್ನಿತರ ಇಲಾಖೆಯಲ್ಲೂ ಸ್ವಜನಪಕ್ಷಪಾತ ನಡೆಯುತ್ತಿದೆ.
ಕಾಂಗ್ರೆಸ್ ಅಂದ್ರೆ ಸ್ವಜನ ಪಕ್ಷಪಾತ. ಗಾಂಧಿ ಕುಟುಂಬವೇ ಇದಕ್ಕೆ ಉದಾಹರಣೆ. ಈಗ ಸಚಿವರುಗಳು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಜೋರಾಗಿ ನೀಡೆಯುತ್ತಿದೆ. ಹೀಗಾಗಿ ಸಚಿವರು ತಮ್ಮ ಸಮುದಾಯದವರಿಗೆ ಸ್ಧಾನಮಾನ ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.