ಕಲಬುರಗಿ: ಬಸ್ ನಿರ್ವಾಹಕರು (ಕಂಡಕ್ಟರ್) ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಟಿಕೆಟ್ ಕೊಡುವ ಜೊತೆಗೆ ಅವರು ಟೆಕೆಟ್ ಪಡೆದ ಸ್ಥಳ ಅಥವಾ ಊರಿನಲ್ಲಿಯೇ ಇಳಿಯುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಯೋಜನೆ ಜಾರಿಗೆ ಬಂದ ನಂತರ ಸಾರಿಗೆ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಚಾರ ಹೆಚ್ಚಾಗಿದೆ.
ಈ ಯೋಜನೆಯ ಸದುಪಯೋಗದ ಜೊತೆಗೆ ದುರುಪಯೋಗವೂ ಆಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಆಧಾರ್ ಕಾರ್ಡ್ ಪ್ರದರ್ಶಿಸಿ ಉಚಿತವಾಗಿ ಟಿಕೆಟ್ ಪಡೆಯುವ ಕೆಲ ಮಹಿಳೆಯರು, ತಾವು ಟೆಕೆಟ್ ಪಡೆದ ಊರುಗಳಲ್ಲಿ ಇಳಿಯುತ್ತಿಲ್ಲ. ಇದರಿಂದ ಬಸ್ ನಿರ್ವಾಹಕರು ಅನಗತ್ಯ ಸಮಸ್ಯೆ ಎದುರಿಸುವ ಜೊತೆಗೆ ಅಮಾನತಿನಂತಹ ಶಿಕ್ಷೆಗೂ ಗುರಿಯಾಗಬೇಕಾಗಿದೆ.
ಪ್ರಕರಣ-1: ಈಚೆಗೆ ಕಲಬುರಗಿ-ಯಾದಗಿರಿ ಬಸ್ ಹತ್ತಿದ ಇಬ್ಬರು ಮಹಿಳೆಯರು ಹಲಕರ್ಟಿಗೆ ಟಿಕೆಟ್ ಪಡೆದಿದ್ದರು. ಆದರೆ, ಮಾರ್ಗಮಧ್ಯದ ವಾಡಿಯಲ್ಲಿ ಇಳಿದುಕೊಂಡರು. ಇದನ್ನು ಗಮನಿಸಿದ ನಿರ್ವಾಹಕ, ‘ನೀವು ಹಲಕರ್ಟಿವರೆಗೂ ಟಿಕೆಟ್ ಪಡೆದಿದ್ದೀರಿ. ಅಲ್ಲಿಯೇ ಇಳಿದುಕೊಳ್ಳಬೇಕು’ ಎಂದು ತಾಕೀತು ಮಾಡಿದರು. ಈ ಮಧ್ಯೆಯೇ ಒಬ್ಬ ಮಹಿಳೆ, ‘ನಾನು ವಾಡಿಯಿಂದ ಅಗತ್ಯವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕು’ ಎನ್ನುತ್ತಲೇ ಬಸ್ನಿಂದ ದೂರ ಸಾಗಿದರು.
ಮತ್ತೊಬ್ಬ ಮಹಿಳೆ ವಾಪಸ್ ಬಸ್ ಹತ್ತಿ ಕುಳಿತರು. ಆಗ ಅವರನ್ನು ತರಾಟೆಗೆ ತೆಗೆದುಕೊಂಡ ಕಂಡಕ್ಟರ್, ‘ಫ್ರೀ ಟಿಕೆಟ್ ಇದೆ ಎಂದು ತಮಗೆ ಇಷ್ಟ ಬಂದಲ್ಲಿ ಇಳಿಯುವುದಲ್ಲ. ಇದರಿಂದ ನಮ್ಮ ಕರ್ತವ್ಯಕ್ಕೆ ತೊಂದ್ರೆಯಾಗ್ತದೆ. ಸಸ್ಪೆಂಡ್ ಮಾಡ್ತಾರೆ’ ಎಂದು ಅಸಮಾಧಾನ ಹೊರಹಾಕಿದರು. ಅದಕ್ಕೆ ಮಹಿಳೆ, ‘ವಾಡಿಯಿಂದ ಮನೆಗೆ ದಿನಸಿ ಸೇರಿ ಅಗತ್ಯ ವಸ್ತುಗಳನ್ನು ತಗೊಂಡು ಹೋಗಬೇಕಿತ್ತು’ ಎಂದು ಸಮಜಾಯಿಷಿ ನೀಡಿದರು. ಮಾತಿಗೆಮಾತು ಬೆಳೆಯುತ್ತಲೇ ಹಲಕರ್ಟಿ ಬಂತು. ಕೊನೆಗೆ ತನ್ನ ತಪ್ಪು ಒಪ್ಪಿಕೊಂಡ ಮಹಿಳೆ, ‘ಮತ್ತೊಮ್ಮೆ ಹೀಗೆ ಮಾಡಲ್ಲ’ ಎಂದು ಬಸ್ನಿಂದ ಕೆಳಗಿಳಿದರು.