ಹುಬ್ಬಳ್ಳಿ: ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆಯಲ್ಲಿ ಹೆಸರು ಹೊಂದಾಣಿಕೆ ಆಗದೆ ಕಾರಣ ಜಿಲ್ಲೆಯ 25,386 ಪಡಿತರದಾರರು ‘ಅನ್ನಭಾಗ್ಯ’ ಯೋಜನೆಯಿಂದ ವಂಚಿತರಾಗಿದ್ದಾರೆ. ಒಟ್ಟು 3.51 ಲಕ್ಷ ಜನ ಯೋಜನೆಯ ಲಾಭ ಪಡೆದಿದ್ದಾರೆ.
2023ರ ಜುಲೈನಿಂದ ಅನುಷ್ಠಾನಗೊಂಡ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯುವ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ ₹34ರಂತೆ ಒಬ್ಬ ಸದಸ್ಯನಿಗೆ ₹170 ಅನ್ನು ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ.
ಆದರೆ, ಎನ್ಪಿಸಿಐ(ನಿರ್ದಿಷ್ಟ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು) ಮ್ಯಾಪಿಂಗ್, ಇ-ಕೆವೈಸಿ ಆಗದೆ ಸಾವಿರಾರು ಪಡಿತರದಾರರು ಯೋಜನೆಯಿಂದ ವಂಚಿತರಾಗಿದ್ದಾರೆ. ಸತತ ಮೂರು ತಿಂಗಳಿನಿಂದ ಪಡಿತರ ಪಡೆಯದವರ ಖಾತೆಗೆ ಹಣ ಜಮೆಯಾಗುವುದಿಲ್ಲ. 2023ರ ಜುಲೈನಿಂದ ಡಿಸೆಂಬರ್ವರೆಗೆ 12,572 ಪಡಿತರದಾರರ ಖಾತೆಗೆ ಹಣ ಜಮೆ ಆಗಿಲ್ಲ. ಆದರೆ ಸತತವಾಗಿ ಮೂರು ತಿಂಗಳು ಪಡಿತರ ಪಡೆದ ನಂತರ ದಾಖಲೆಗಳು ಸರಿಯಾಗಿದ್ದಲ್ಲಿ ಅವರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಒಟ್ಟು 3,54,979 ಬಿಪಿಎಲ್ ಪಡಿತರ ಚೀಟಿ, 95,975 ಎಪಿಎಲ್ ಪಡಿತರ ಚೀಟಿ ಹಾಗೂ 10,313 ಜನ ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು, 2024ರ ಜನವರಿವರೆಗೆ 3.51 ಲಕ್ಷ ಪಡಿತರದಾರರು ‘ಅನ್ನಭಾಗ್ಯ’ ಯೋಜನೆಯ ಲಾಭ ಪಡೆದಿದ್ದು, ಈವರೆಗೆ ಒಟ್ಟು ₹153 ಕೋಟಿ ಜಮೆ ಆಗಿದೆ.