ಹಾನಗಲ್: ಬಿತ್ತನೆ ಬೀಜಗಳ ನಕಲಿ ಹಾವಳಿ ತಡೆಯುವ ನಿಟ್ಟಿನಲ್ಲಿ ಮುಂಗಾರು ಪೂರ್ವದಿಂದಲೇ ಕೃಷಿ ಇಲಾಖೆ ಬಿತ್ತನೆ ಬೀಜಗಳ ಪ್ಯಾಕೇಟ್ ಮೇಲೆ ಕ್ಯೂಆರ್ ಕೋಡ್ ಸ್ಕ್ಯಾನ್ ಕಡ್ಡಾಯಗೊಳಿಸಿದೆ. ರೈತರಿಗೆ ಪ್ರಮಾಣೀಕೃತ ಬೀಜಗಳ ವಿತರಣೆ ಮತ್ತು ಅಕ್ರಮ ದಾಸ್ತಾನು ತಡೆಗಟ್ಟುವ ಉದ್ದೇಶ ಹೊಂದಲಾಗಿದೆ.
ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ಸಂಗ್ರಹಿಸಿಕೊಂಡು ತಾಲ್ಲೂಕಿನ 9 ಕೇಂದ್ರಗಳ ಮೂಲಕ ವಿತರಣೆ ಆರಂಭಿಸಿದೆ. ಸಹಾಯಧನದ ವಿತರಣಾ ಕೇಂದ್ರಗಳಿಗೆ ರೈತರು ಆಗಮಿಸಿ ಬೀಜ ಖರೀದಿಯಲ್ಲಿ ತೊಡಗಿದ್ದಾರೆ. ಬೀಜ ವಿತರಣೆ ಮತ್ತು ಖರೀದಿ ಹಣ ಸಂದಾಯಕ್ಕೆ ಇಲಾಖೆ ಅಳವಡಿಸಿಕೊಂಡಿರುವ ಡಿಜಿಟಲ್ ವ್ಯವಸ್ಥೆಗೆ ಈಗ ರೈತರೂ ಒಗ್ಗಿಕೊಳ್ಳಬೇಕಾಗಿದೆ.
ಬೀಜ ವಿತರಣೆ ಸಮಯದಲ್ಲಿ ಪ್ರತಿ ಪ್ಯಾಕೆಟ್ ಮೇಲೆ ಬಾರ್ಕೋಡ್ ಸ್ಕ್ಯಾನ್ ಆದ ಬಳಿಕವೇ ಖರೀದಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬೀಜ ವಿತರಣಾ ಕೇಂದ್ರಗಳಲ್ಲಿ ರೈತರು ಖರೀದಿಸುವ ಬೀಜಗಳ ಪ್ರತಿ ಪ್ಯಾಕೇಟ್ ಸ್ಕ್ಯಾನ್ ಮಾಡಿದ ನಂತರ ಸೀಡ್ ಎಂಐಎಸ್ ತಂತ್ರಾಂಶದಲ್ಲಿ ಕ್ಯೂಆರ್ ಕೋಡ್ ವಿವರ ಮತ್ತು ಇನ್ನುಳಿದ ವಿವರಗಳು ದಾಖಲಾಗುತ್ತವೆ.
ಬಿತ್ತನೆ ಬೀಜಗಳನ್ನು ವಿತರಣಾ ಕೇಂದ್ರದಲ್ಲಿ ದಾಸ್ತಾನು ಮಾಡುವ ಮುನ್ನ ಬೀಜದ ಪ್ಯಾಕೇಟ್ಗಳ ಮೇಲೆ ಕ್ಯೂಆರ್ ಕೋಡ್ ನಮೂದಿಸಿರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಖರೀದಿ ಸಮಯದಲ್ಲಿ ಪ್ರತಿ ಪ್ಯಾಕೇಟ್ ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ವಿವರಗಳನ್ನು ನಮೂದು ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಯಾವುದೇ ಕಾರಣಕ್ಕೂ ಕ್ಯೂಆರ್ ಕೋಡ್ ದಾಖಲಿಸದಂತೆ ಬೀಜ ವಿತರಣೆ ಮಾಡುವಂತಿಲ್ಲ’ ಎಂದು ಇಲ್ಲಿನ ಎಪಿಎಂಸಿ ಪ್ರಾಂಗಣದ ಬೀಜ ವಿತರಣೆ ಕೇಂದ್ರದ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ತಿಳಿಸಿದ್ದಾರೆ.