ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ರದ್ದಿಗೆ SIT ಮನವಿ!
ಬೆಂಗಳೂರು: ಹಾಸನದ ಹಾಲಿ ಸಂಸದ, ಮಾಜಿ ಶಾಸಕ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದ್ದಂತೆ ಈ ರೀತಿ ವಿದೇಶಕ್ಕೆ ಹಾರುವ ಮೂಲಕ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಸಹ ಕೇಳಿಬಂದಿದೆ.
ಈಗಾಗಲೇ ಚುರುಕು ತನಿಖೆಯನ್ನು ಕೈಗೊಂಡಿರುವ ಎಸ್ಐಟಿ ತಂಡ, ಪ್ರಜ್ವಲ್ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ.
ಈ ಪ್ರಕರಣ ಬೆಳಕಿಗೆ ಬಂದು ಇಂದಿಗೆ ಒಂದು ತಿಂಗಳು ಸಮೀಪಿಸುತ್ತಿದ್ದರೂ ಪ್ರಜ್ವಲ್ ರೇವಣ್ಣ ಮಾತ್ರ ಇನ್ನೂ ವಿದೇಶದಿಂದ ಬೆಂಗಳೂರಿಗೆ ವಾಪಾಸ್ ಆಗಿಲ್ಲ. ಸದ್ಯ ಇದು ಎಸ್ಐಟಿಗೆ ದೊಡ್ಡ ತಲೆನೋವಾಗಿದ್ದು, ಬಂಧನದ ವಾರೆಂಟ್ ಉಲ್ಲೇಖ ಮಾಡಿ, ವಿದೇಶಾಂಗ ಸಚಿವಾಲಯಕ್ಕೆ ಪತ್ರವನ್ನು ರವಾನಿಸಿದೆ. ಈ ಕೂಡಲೇ ಪ್ರಜ್ವಲ್ಗೆ ಸಂಬಂಧಿಸಿದ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಬೇಕು ಎಂದು ಪತ್ರದ ಮುಖೇನ ಮನವಿ ಮಾಡಿರುವುದು ತಿಳಿದುಬಂದಿದೆ.
ಇನ್ನು ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ‘ಪ್ರಜ್ವಲ್ ನಿಮಗೆ ಎಚ್.ಡಿ. ದೇವೇಗೌಡರು ಮತ್ತು ನಮ್ಮ ಮೇಲೆ ಗೌರವವಿದ್ದರೇ ದಯವಿಟ್ಟು ರಾಜ್ಯಕ್ಕೆ ಹಿಂತಿರುಗಿ. ನೀವು ಎಲ್ಲಿದ್ದರೂ 24-48 ಗಂಟೆಯೊಳಗೆ ಆಗಮಿಸಿ, ಎಸ್ಐಟಿ ತಂಡದ ಮುಂದೆ ಶರಣಾಗಿ ತನಿಖೆಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು,