ಔರಾದ್: ಕುಡಿಯುವ ನೀರು ಪೂರೈಸಲು ಆಗ್ರಹಿಸಿ ತಾಲ್ಲೂಕಿನ ಕೌಠಾ ಗ್ರಾಮಸ್ಥರು ಶನಿವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಗ್ರಾಮದ ವಾರ್ಡ್ -1ರ ಮಹಿಳೆಯರು ಸೇರಿದಂತೆ ಅನೇಕರು ಸಮಸ್ಯೆ ಹೇಳಿಕೊಳ್ಳಲು ಪಂಚಾಯಿತಿ ಕಚೇರಿಗೆ ಹೋದರು. ಆದರೆ ಸಮಸ್ಯೆಗೆ ಸ್ಪಂದನ ಸಿಗದ ಕಾರಣ ಸ್ಥಳದಲ್ಲೇ ಕೆಲ ಹೊತ್ತು ಧರಣಿ ಕುಳಿತು ಸಂಬಂಧಿತ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.
‘ವಾರ್ಡ್-1ರ ಮೂಲಕ ಹಾದು ಹೋದ ಪೈಪ್ ಒಡೆದು ಹೋಗಿದೆ. ಹೀಗಾಗಿ ಟ್ಯಾಂಕಿಗೆ ನೀರು ಹೋಗುತ್ತಿಲ್ಲ. ಇದರಿಂದ ನಮ್ಮ ಗಲ್ಲಿಗೆ ಅನೇಕ ದಿನಗಳಿಂದ ನೀರು ಬರುತ್ತಿಲ್ಲ. ಪಂಚಾಯಿತಿಯವರಿಗೆ ಸಾಕಷ್ಟು ಸಲ ಹೇಳಿದರೂ ಪ್ರಯೋಜನವಾಗಿಲ್ಲ’ ಎಂದು ರಮೇಶ ಬಿರಾದಾರ್ ದೂರಿದರು.
ವಿಷಯ ತಿಳಿದ ಸಂತಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರನ್ನು ಸಮಾಧಾನ ಮಾಡಿ ಆದಷ್ಟು ಬೇಗ ನೀರಿನ ವ್ಯವಸ್ಥೆ ಮಾಡಲು ಭರವಸೆ ನೀಡಿದರು.