ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ ಬಂದಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಯಾವುದದೇ ಜಾತ್ರೆ, ಉತ್ಸವ, ಹಬ್ಬ, ಹರಿದಿನಗಳಿರಲಿ ಅಲ್ಲಿ ಕಡ್ಡಾಯವಾಗಿ ಕುಸ್ತಿ ಇರಲೇಬೇಕು.
ಕುಸ್ತಿ ಇಲ್ಲಿಯ ಜನರಿಗೆ ಒಂದು ಮನರಂಜನೆಯಾದರೆ ಪೈಲ್ವಾನರಿಗೆ ತಮ್ಮ ಕಲೆ ಪ್ರದರ್ಶನ ಮಾಡಲು ಒಂದು ವೇದಿಕೆ ದೊರೆತಂತಾಗುತ್ತದೆ. ಗ್ರಾಮೀಣರಲ್ಲಿ ನಮ್ಮ ಮನೆಯಲ್ಲಿ ಒಬ್ಬ ಕುಸ್ತಿಪಟು ಇದ್ದಾನೆ ಎಂಬುದನ್ನು ಹೇಳಿಕೊಳ್ಳುವುದೇ ಒಂದು ಹೆಮ್ಮೆಯ ಸಂಗತಿ.
ರಬಕವಿ ಬನಹಟ್ಟಿ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ನಾವು ಗರಡಿ ಮನೆಗಳನ್ನು ಕಾಣಬಹುದಾಗಿದೆ.
ಅಲ್ಲಿ ಬೆಳಗ್ಗೆ ಮತ್ತು ಸಂಜೆ ಹಿರಿಯ ಪೈಲ್ವಾನರ ಮಾರ್ಗದರ್ಶನದಲ್ಲಿ ಕಿರಿಯರು ತಾಲೀಮು ನಡೆಸುತ್ತಾರೆ. ಅಂತಹದ್ದೇ ಒಂದು ತಾಲಿಮನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಸೋಮವಾರಪೇಟೆ ಎಂಬಲ್ಲಿ ಸಮಸ್ತ ದೈವ ಮಂಡಳಿಯ ಶತಮಾನ ಕಂಡಿರುವ ಗರಡಿ ಮನೆ ನಿತ್ಯ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಾ ಹೊಸ ಪ್ರತಿಭೆಗಳನ್ನು ಬೆಳೆಸುತ್ತಾ ನಡೆದಿದೆ.