ಕೊಪ್ಪಳ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಕೇಂದ್ರ ಸರ್ಕಾರವು ಅಸಹಕಾರ ತೋರುತ್ತಿದೆ ಎಂದು ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ವಿಚಾರದಲ್ಲಿ ಸರ್ಕಾರ ಈಗಾಗಲೇ ತನಿಖೆ ಆರಂಭಿಸಿದೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು ವಿದೇಶದಿಂದ ಕರೆತಂದು ಬಂಧಿಸಲು ಕೇಂದ್ರ ಸಹಕಾರ ಕೊಡಬೇಕಿದೆ. ಅವರಿಂದಲೇ ನಮಗೆ ಸಹಕಾರ ಸಿಗುತ್ತಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರಕಾರ ಪತನವಾಗಲಿದೆ ಎಂಬ ಮಹಾ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರ, ಬಿಜೆಪಿಗೆ ಸ್ವಂತ ಬಲದ ಮೇಲೆ ಗೆದ್ದ ಉದಾಹರಣೆಯಿಲ್ಲ. ರಾಜ್ಯದಲ್ಲಿ ಸಿಂಧೆಯಂಥ ಯಾರೂ ಇಲ್ಲ. ಈ ಬಾರಿ ರಾಜ್ಯದಲ್ಲಿ ಅಂತಹ ಪರಸ್ಥಿತಿ ನಿರ್ಮಾಣವಾಗಲ್ಲ. ಬಿಜೆಪಿಯವರು ಸುಳ್ಳುಗಾರರು, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂಬುದು ರಾಜ್ಯ ಹಾಗೂ ದೇಶದಲ್ಲಿ ಗೊತ್ತಿದೆ. ಅವರು ಸುಳ್ಳು ಹೇಳುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ಬಿಜೆಪಿ ಸರಕಾರ ಮಾಡುವಾಗ ಏನ್ ಬೇಕಾದರೂ ಸುಳ್ಳು ಹೇಳಿ ಕರೆದುಕೊಂಡು ಹೋಗುತ್ತಾರೆ. ಆದರೆ ಯಾವ ಆಸೆಗಳನ್ನು ಈಡೇರಿಸುವುದಿಲ್ಲ. ನಮ್ಮ ಪಕ್ಷದ ಶಾಸಕರು ಹೋಗೋದಿಲ್ಲ. ಬಿಜೆಪಿಯವರು ಹಗಲುಗನಸು ಕಾಣೋದನ್ನು ಬಿಡಲಿ. ಯಾವುದೇ ಕಾರಣಕ್ಕೂ ಸರಕಾರ ಬದಲಾಗಲ್ಲ. ಶಿಂಧೆ ಹೇಳಿದರೂ ಅಷ್ಟೆ, ಮೋದಿ ಹೇಳಿದರೂ ಅಷ್ಟೆ ನಮ್ಮ ಸರಕಾರ ಬೀಳೋದಿಲ್ಲ ಎಂದರು.