ಬೆಂಗಳೂರು, ಮೇ. 17: ಕನ್ನಡ ಸಿನಿಮಾದಿಂದ ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೊಸದಾಗಿ ಉದ್ಘಾಟನೆಗೊಂಡ ಅಟಲ್ ಸೇತು ಸೇತುವೆಯನ್ನು ಶ್ಲಾಘಿಸಿದ್ದಾರೆ. ಇದು ಮುಂಬೈನ ಸಾರಿಗೆ ಪ್ರಯಾಣದಲ್ಲಿ ಗಮನಾರ್ಹ ಬದಲಾವಣೆ ಮಾಡಿದೆ ಎಂದು ಹೇಳಿದ್ದರು.
ಇದಕ್ಕೆ ಕಾಂಗ್ರೆಸ್ ನಾಯಕಿ ಅಂಜಲಿ ನಿಂಬಾಳ್ಕರ್ ಕಿಡಿಕಾರಿದ್ದಾರೆ.
ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಕರ್ನಾಟಕ ಮಾಜಿ ಸಚಿವೆ ಡಾ. ಅಂಜಲಿ ನಿಂಬಾಳ್ಕರ್ ಅವರು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸ್ವಲ್ಪ ಕಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಬೂಟು ನೆಕ್ಕುವುದನ್ನು ನಿಲ್ಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮ್ಮನ್ನು ಮೆಗಾಸ್ಟಾರ್ ಮಾಡಲ್ಲ
ನಟಿ ರಶ್ಮಿಕಾ ಮಂದಣ್ಣ ವಿಡಿಯೋಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವಮಾಜಿ ಸಚಿವೆ ಅಂಜಲಿ ನಿಂಬಾಳ್ಕರ್, ಬುಲೆಟ್ ರೈಲಿನ ಬಗ್ಗೆ ನಿಮಗೆ ಏನಾದರೂ ಹೇಳಲು ಇದೆಯೇ..? ಎಂದು ಬುಲೆಟ್ ಟ್ರೈನ್ ಬಗ್ಗೆ ಪ್ರಶ್ನಿಸಿದ್ದಾರೆ. ಇದಾದ ಬಳಿಕ ‘ಮುಂಬೈ ಮತ್ತು ಅಹಮದಾಬಾದ್ ಬುಲೆಟ್ ರೈಲು : ಅದೊಂದು ನಿರ್ಮಾಣದ ದುರಂತ, ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮಗೆ ಮೆಗಾಸ್ಟಾರ್ ಮಾಡಲು ಯಾವುದೇ ಸಹಾಯ ಮಾಡುವುದಿಲ್ಲ” ಎಂದು ವಾಗ್ದಾಳಿ ನಡೆಸಿದ್ದಾರೆ.
ರಶ್ಮಿಕಾ ಮಂದಣ್ಣಗೆ ಚೇತನ್ ಅಹಿಂಸಾ ತಿರುಗೇಟು
ಇನ್ನು, ನಟಿ ರಶ್ಮಿಕಾ ಮಂದಣ್ಣ ಅವರ ಮಾತುಗಳಿಗೆ ನಟ ಚೇತನ್ ತಿರುಗೇಟು ನೀಡಿದ್ದಾರೆ. “ಕಳೆದ 10 ವರ್ಷಗಳಲ್ಲಿ, ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ ಮತ್ತು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ.ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ ‘ಫ್ರ್ಯಾಕಿಂಗ್ ಬ್ರಿಲಿಯಂಟ್’ ರೂಪವಾಗಿದೆ” ಎಂದು ಟೀಕಿಸಿದ್ದಾರೆ.