ವಿಜಯಪುರ: ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಂತರ ಕಾಣೆಯಾಗಿದ್ದರು. ಆದರೆ ಇಂದು ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ವಿಜಯನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಶವಗಳು ಪತ್ತೆಯಾಗಿದ್ದು ಮೃತರನ್ನು ಗದಗ ಮೂಲದ 9 ವರ್ಷದ ಅನುಷ್ಕಾ ಅನಿಲ ದಹಿಂಡೆ 7 ವರ್ಷದ ವಿಜಯ ಅನಿಳ ದಹಿಂಡೆ ಮತ್ತು ವಿಜಯಪುರ ಮೂಲದ 7 ವರ್ಷದ ಮಿಹಿರ್ ಶ್ರೀಕಾಂತ ಜಾನಗೌಳಿ ಎಂದು ಗುರುತಿಸಲಾಗಿದೆ.
ಬೇಸಿಗೆ ರಜೆಗಾಗಿ ಗದಗ ಮೂಲದ ಅನುಷ್ಕಾ ಮತ್ತು ವಿಜಯ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ನಂತರ ಮಕ್ಕಳು ಕಾಣೆಯಾಗಿದ್ದರು. ಇನ್ನು ಮಕ್ಕಳು ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು ಎನ್ನಲಾಗುತ್ತಿದೆ.