Breaking News

ಬಿಸಲಿನ ತಾಪಕ್ಕೆ ಹೊಂಡದಲ್ಲಿ ಸಾಕಿದ್ದ 17 ಸಾವಿರ ಮೀನುಗಳು ಸಾವು; ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವ ರೈತ ಕಂಗಾಲು

Spread the love

ವಿಜಯಪುರ, ಮೇ. 12: ಜಿಲ್ಲೆಯಲ್ಲಿ ಬಿಸಿಲಿನ ಕಾಟ ಮುಂದುವರೆದಿದ್ದು, ಹಿಂದೆಂದಿಗಿಂತ ಹೆಚ್ಚಿನ ತಾಪಮಾನದ ಬಿಸಿಲು ಅಂದರೆ 42 ರಿಂದ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇಂತಹ ಬಿರು ಬಿಸಿಲಿಗೆ ಮೀನು ಕೃಷಿ ಮಾಡಿದ ಯುವಕ ಬಾರೀ ನಷ್ಟವನ್ನು ಅನುಭವಿಸುವಂತಾಗಿದೆ. ವಿಜಯಪುರ(Vijayapur) ನಗರದ ನಿವಾಸಿ ವಿಜಯಕುಮಾರ ಕವಟಗಿ ಬಿಇ ಪದವೀಧರ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ವಿಜಯಪುರ ತಾಲೂಕಿನ ಮದಭಾವಿ ತಾಂಡಾ 2 ರ ಬಳಿಯಿರುವ ಸ್ವಂತ ಜಮೀನಿನಲ್ಲಿ ಮೀನು ಕೃಷಿ(Fish farming) ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ ಮತ್ಸ್ಯ ಯೋಜನೆಯಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ತಮ್ಮದೇ ಜಮೀನಿನಲ್ಲಿ ದೊಡ್ಡದಾದ ಹೊಂಡವನ್ನು ನಿರ್ಮಾಣ ಮಾಡಿರೋ ವಿಜಯಕುಮಾರ್​, ಸ್ನೇಕ್ ಹೆಡ್ ಮುರೆಲ್ ತಳಿಯ ಮೀನುಗಳನ್ನು ಸಾಕಿ ಕಳೆದ ವರ್ಷ 8 ರಿಂದ 10 ಲಕ್ಷ ರೂಪಾಯಿ ನಿವ್ವಳ ಲಾಭ ಮಾಡಿಕೊಂಡಿದ್ದರು.

17 ಸಾವಿರ ಮೀನುಗಳು ಸಾವು

ಈ ಬಾರಿ ಕೂಡ ಮೀನು ಸಾಕಾಣಿಕೆಯಲ್ಲಿ ಮತ್ತಷ್ಟು ಪರಿಣಿತಿ ಪಡೆದು 18 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿ 17000 ಕ್ಕೂ ಆಧಿಕ ಸ್ನೇಕ್ ಹೆಡ್ ಮುರೆಲ್ ತಳಿಯ ಮೀನುಗಳನ್ನು ಸಾಕಾಣಿಕೆ ಮಾಡಿದ್ದರು. ಇನ್ನೇನು ಮೀನುಗಳು ಬೆಳೆದಿದ್ದು ಮಾರಾಟಕ್ಕೆ ಬಂದಿದೆ. ಅದರಂತೆ ಮಾರಾಟ ಮಾಡಲು ತಯಾರಿ ನಡೆಸುತ್ತಿರೋವಾಗಲೇ ಹೊಂಡದಲ್ಲಿದ್ದ 17 ಸಾವಿರ ಮೀನುಗಳು ಸಾವನ್ನಪ್ಪಿದ್ದು ವಿಜಯಕುಮಾರ್​ ಕವಟಗಿಗೆ ಆಕಾಶವೇ ತಲೆ ಮೇಲೆ ಬಿದ್ದಂತ ಅನುಭವ ಆಗಿದೆ.

 

ಇನ್ನು ವಿಜಯಕುಮಾರ್​,​ ಕಳೆದ ವರ್ಷ ಹೈದರಾಬಾದ್ ಹಾಗೂ ಇತರೆ ನಗರದ ಮಾರುಕಟ್ಟೆಗಳಲ್ಲಿ ಮೀನುಗಳನ್ನು ಮಾರಾಟ ಮಾಡಿದ್ದರು. ಮೊದಲ ವರ್ಷದ ಮೀನು ಕೃಷಿಯಲ್ಲಿ 8 ರಿಂದ 10 ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದರು. ಒಂದು ವರ್ಷದ ಅನುಭವದಲ್ಲಿ ಮತ್ತಷ್ಟು ಉತ್ತಮ ಇಳುವರಿ ಪಡೆಯಲು ಮುಂದಾಗಿದ್ದ ಬಿಇ ಇಂಜಿನೀಯರ್. ಈ ವರ್ಷ 18 ರಿಂದ 20 ಲಕ್ಷ ರೂಪಾಯಿ ಖರ್ಚು ಮಾಡಿ ಉತ್ತಮವಾಗಿ ಮೀನುಗಳನ್ನು ಸಾಕಾಣಿಕೆ ಮಾಡಿದ್ದರು. ಅವುಗಳನ್ನು ಮಾರಾಟ ಮಾಡಲು ಹೈದರಾಬಾದ್ ಹಾಗೂ ಇತರ ಕಡೆಗಳಲ್ಲಿ ವ್ಯಾಪಾರಸ್ಥರನ್ನು ಸಂಪರ್ಕ ಮಾಡಿ ಮಾರಾಟ ಮಾಡಲು ಮುಂದಾಗಿದ್ದ. ಇಷ್ಟರ ಮದ್ಯೆಯೇ ಇವರ ಹೊಂಡದಲ್ಲಿದ್ದ 17000 ಮೀನುಗಳು ಸಾವನ್ನಪ್ಪಿವೆ. ಇದಕ್ಕೆ ಪ್ರಮುಖ ಕಾರಣ ಉಷ್ಣಾಂಶ ಏರಿಕೆ ಎಂದು ವಿಜಯಕುಮಾರ್​ ಮಾಹಿತಿ ನೀಡಿದ್ದಾರೆ.

ಸಾಲ ಸೋಲ ಮಾಡಿ ಹಾಕಿದ್ದ ಬಂಡವಾಳ, ನೀರಲ್ಲಿ ಹಾಕಿದಂತಾಗಿದೆ. ವಾಟರ್ ಟೆಂಪ್ರೇಚರ್ ಅಂಡರ್ ವಾಟರ್ 35 ಕ್ಕೂ ಆಧಿಕವಾಗಿತ್ತು. ಹೊರಗಡೆ 42 ರಿಂದ 45 ಡಿಗ್ರಿ ಸೆಲ್ಸಿಯಸ್​ಗೆ ಹೋಗಿದೆ. ನೀರನ್ನು ತೆಗೆದು ಹೊಸ ನೀರು ಬಿಡಲು ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಒಂದೆಡೆ ಉಷ್ಣಾಂಶ ಏರಿಕೆ, ನೀರಲ್ಲಿ ಆಮ್ಲಜನಕ ಕೊರತೆ ಕಾರಣದಿಂದ ಮೀನುಗಳು ಒಮ್ಮೇಲೆ ಸಾವನ್ನಪ್ಪಿವೆ. ಮೀನುಗಳ ಮಾರಾಟದಿಂದ 35 ಲಕ್ಷಕ್ಕೂ ಆಧಿಕ ಹಣ ಬರುತ್ತಿತ್ತು. 20 ಲಕ್ಷ ರೂಪಾಯಿ ಖರ್ಚು ತೆಗೆದರೂ 15 ಲಕ್ಷಕ್ಕೂ ಆಧಿಕ ಲಾಭ ನಮಗೆ ಸಿಗುತ್ತಿತ್ತು. ಮೀನುಗಳ ಸಾವಿನಿಂದ ನಮಗೆ ನಷ್ಟವಾಗಿದೆ ಎಂದು ನೋವನ್ನು ಹೊರ ಹಾಕಿದ್ದಾರೆ.

ಜಿಲ್ಲೆಯಲ್ಲಿನ ಬಿಸಿಲಿನ ತಾಪಕ್ಕೆ ಮೀನು ಕೃಷಿ ಮಾಡಿದ ಯುವ ರೈತ ನಷ್ಟವನ್ನು ಅನುಭವಿಸುಂತಾಗಿದೆ. ಮಾರಾಟದ ಹಂತಕ್ಕೆ ಬಂದ ಮೀನುಗಳು ಬಿಸಿಗೆ ಹಾಗೂ ನೀರಲ್ಲಿ ಆಮ್ಲಜನಕ ಕೊರತೆಯಿಂದ ಅಸುನೀಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ಕೈಗೆ ಬಾರದಂತಾಗಿದೆ. ಇತ್ತ ಮೀನುಗಾರಿಕಾ ಇಲಾಖೆಯಿಂದ ಯಾವುದೇ ವಿಮೆ ಸೌಲಭ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೀನು ಕೃಷಿ ಮಾಡಿದ್ದ ಬಿಇ ಇಂಜಿನೀಯರ್​ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರಣ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರು ನಮಗೆ ಸೂಕ್ತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ