ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್ಡ್ರೈವ್ ಪ್ರಕರಣಕ್ಕೆ (Hassan Pen Drive Case) ಸಂಬಂಧಪಟ್ಟಂತೆ ಎಚ್.ಡಿ. ರೇವಣ್ಣ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.ನಿನ್ನ ಮಗನಿಂದ ತಲೆ ತಗ್ಗಿಸಬೇಕಾಗಿ ಬಂತು. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು ಎಂದು ಹರಿಹಾಯ್ದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಎಚ್.ಡಿ. ದೇವೇಗೌಡ ನಿವಾಸದಲ್ಲಿ ಸಭೆ ನಡೆದಿದ್ದು, ಪ್ರಜ್ವಲ್ ಪ್ರಕರಣದಲ್ಲಿ ರಾಜಕೀಯ ವಿರೋಧಿಗಳ ವಿರುದ್ಧ ಕಾನೂನು ಹೋರಾಟದ ಬಗ್ಗೆ ಚರ್ಚೆಯನ್ನು ನಡೆಸಲಾಗಿದೆ. ದೇವೇಗೌಡರ ಸಮ್ಮುಖದಲ್ಲಿ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಿಟ್ಟಾಗಿ ರೇವಣ್ಣ ಮೇಲೆ ಕಿಡಿಕಾರಿದ್ದಾರೆ ಎನ್ನಲಾಗಿದೆ.
“ನಿನ್ನ ಮಗ ಮಾಡಿದ ಕೃತ್ಯಕ್ಕೆ ನಾವು ತಲೆ ತಗ್ಗಿಸಬೇಕು. ಇಡೀ ಪ್ರಪಂಚಕ್ಕೆ ಗೊತ್ತಾಗುವ ಕೆಲಸ ಮಾಡಿ ಹೋದ. ದೇಶದಲ್ಲಿ ತಲೆ ಎತ್ತಿಕೊಳ್ಳದಂತೆ ಮಾಡಿ ಹೋದ” ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೂ ಸಹ ಇದೇ ವೇಳೆ ತಮ್ಮ ಅಸಮಾಧಾನ ಹೊರಹಾಕಿದ್ದು, ನನ್ನ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ಇಂತಹ ಕಪ್ಪು ಚುಕ್ಕೆ ನಮ್ಮ ವಿರುದ್ಧ ಬಂದಿರಲಿಲ್ಲ. ನಿನ್ನ ಮಗನಿಂದ ಇಂತಹ ಕಪ್ಪು ಚುಕ್ಕೆ ಬಂತು. ಮಗನನ್ನು ಬೆಳೆಸುವ ವಿಚಾರದಲ್ಲಿ ನೀನು ಎಡವಿದ್ದೀಯಾ ಎಂದು ಗರಂ ಆಗಿದ್ದಾರೆ ಎನ್ನಲಾಗಿದೆ.