ಬಾಗಲಕೋಟೆ: ಬಾಗಲಕೋಟೆ ಕಾಂಗ್ರೆಸ್ (Bagalkot Congress) ಬಿಕ್ಕಟ್ಟಿಗೆ ಇನ್ನು ತೆರೆ ಬಿದ್ದಿಲ್ಲ ಕಾಣುತ್ತಿಲ್ಲ. ನಾಯಕರ ನಡುವಿನ ಸಂಧಾನ ಸಭೆ ವಿಫಲವಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿರುವ ವೀಣಾ ಕಾಶಪ್ಪನವರ್ (Veena Kashappanavar), ರಾಜಕೀಯದಿಂದ ದೂರ ಸರಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಎದುರಾಗಿದೆ.ಏಕೆಂದರೆ ಫೇಸ್ಬುಕ್ನಲ್ಲಿ ವೀಣಾ ಭಾವನಾತ್ಮಕ ಸಂದೇಶ ನೀಡಿದ್ದು, ಕೊಪ್ಪಳ (Koppala) ಉಸ್ತುವಾರಿ ಕೊಟ್ಟರೂ ಗೈರಾಗಿದ್ದಾರೆ.
ವೀಣಾ ಕಾಶಪ್ಪನವರ್ ಪೋಸ್ಟ್ನಲ್ಲಿ ಏನಿದೆ?
ಕಣ್ಣು ನಕ್ಕರೂ ಒದ್ದೆಯಾಗುತ್ತದೆ, ಅತ್ತರೂ ಒದ್ದೆಯಾಗುತ್ತದೆ. ಆದರೆ ನಗಿಸಿದವರು ನಾಲ್ಕು ದಿನ ನೆನಪಿನಲ್ಲಿದ್ದರೆ, ನೋಯಿಸಿದವರು ಜೀವನವಿಡಿ ನೆನಪಿನಲ್ಲಿರುತ್ತಾರೆ…
ನಮಸ್ಕಾರಗಳು ಶುಭದಿನ ಎಂದು ವೀಣಾ ಕಾಶಪ್ಪನವರ್ ಪೋಸ್ಟ್ ಮಾಡಿದ್ದಾರೆ. ಚುನಾವಣೆ ಚಟುವಟಿಕೆಯಿಂದ ಬಹುತೇಕ ದೂರ ಉಳಿದಿರುವ ವೀಣಾ ಕಾಶಪ್ಪನವರ್ ಗಂಗಾವತಿ ಸಮಾವೇಶಕ್ಕೂ ಗೈರಾಗಿದ್ದರು. ಈ ನಡುವೆ ಅಭಿಮಾನಿಗಳಿಗೆ ವೀಣಾ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಇನ್ನು, ಬಾಗಲಕೋಟೆ ಕಾಂಗ್ರೆಸ್ ವೀಣಾ ಬಿಕ್ಕಟ್ಟು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅಭ್ಯರ್ಥಿ ಸಂಯುಕ್ತಾ ಪಾಟೀಲ್, ವೀಣಾ ಕಾಶಪ್ಪನವರ ಆಗಮನದಿಂದ ಆನೆ ಬಲ ಬಂದಂತಾಗಿದೆ. ಅಕ್ಕ ಅಂದ್ರೆ ನನಗೊಬ್ಬಳಿಗೆ ಅಲ್ಲ, ಬಾಗಲಕೋಟೆ ಜಿಲ್ಲೆ ವೀಣಾ ಅಕ್ಕ. ಒಂದು ಕುಟುಂಬದಲ್ಲಿ ಯಾವತ್ತೂ ಮುನಿಸುಗಳು ಅನಿವಾರ್ಯ. ನಾವು ಒಂದೇ ಕುಟುಂಬದವ್ರು ಅಂತಾ ವೀಣಾ ಅಕ್ಕ ತೋರಿಸಿಕೊಟ್ಟಿದ್ದಾರೆ. ಕಾಂಗ್ರೆಸ್ ಜೊತೆಗೆ ಕಾಶಪ್ಪನವರ ಕುಟುಂಬ ದೊಡ್ಡದಿದೆ, ಅಣ್ಣ-ಅಕ್ಕ ಬಂದಿದ್ದಕ್ಕೆ ದೊಡ್ಡ ಶಕ್ತಿ ಬಂದಿದೆ. ಅಕ್ಕ ಜೊತೆಗೆ ನಾವು ಚುನಾವಣೆ ಪ್ರಚಾರದಲ್ಲಿ ತೊಡಗುತ್ತೇನೆ. ವೀಣಾ ಅಕ್ಕನ ಜೊತೆಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.
ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ವೇಳೆ ಮಾತ್ರ ವೀಣಾ ಕಾಶಪ್ಪನವರ, ಮಾಜಿ ಸಚಿವೆ ಉಮಾಶ್ರೀ ಭಾಗಿಯಾಗಿದ್ದರು. ಈ ವೇಳೆಯೂ ಕಾಂಗ್ರೆಸ್ನಲ್ಲಿ ಇನ್ನು ಅಸಮಾಧಾನ ತಣ್ಣಗಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿತ್ತು. ನಾಮಪತ್ರ ಸಲ್ಲಿಕೆ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ ಗರಂ ಆಗಿದ್ದರು, ನಾಮಪತ್ರ ಸಲ್ಲಿಕೆಗೆ ನಮ್ಮನ್ನ ಕರೆದಿಲ್ಲ. ಯಾರಿಗೆ ಹೇಳಿದ್ದೀರಿ ನೀವು ಎಂ ಎಲ್ ಎ ಗಳಿಗೆ, ಯಾರನ್ನ ಕರಿತಿರಿ. ಒಂದು ಫೋನ್ ಮಾಡೋಕೆ ಬರೋದಿಲ್ಲವಾ? ನನಗೆ ಯಾರಾದ್ರೂ ಫೋನ್ ಮಾಡಿದ್ರಾ? ಹೇಳೋ ಸೌಜನ್ಯ ಇದೆ ಏನ್ರೀ ನಿಮಗೆ ಎಂದು ಮುಖಂಡರನ್ನ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಜಿಲ್ಲಾಧ್ಯಕ್ಷ ನಂಜಯ್ಯನಮಠ, ಹೆಚ್ ವೈ ಮೇಟಿ, ಜೆ. ಟಿ. ಪಾಟೀಲ್, ಕಾಶಪ್ಪನವರ ಸಮಾಧಾನ ಪಡಿಸುವ ಕೆಲಸ ಮಾಡಿದ್ದರು.