ಧಾರವಾಡ: ಇಡೀ ದೇಶದ ಗಮನ ಸೆಳೆದಿರುವ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಇನ್ನೊಂದೆಡೆ ಮುಸ್ಲಿಂ ಸಮುದಾಯ ಧಾರವಾಡದಲ್ಲಿ ಅರ್ಧ ದಿನ ಸ್ವಯಂ ಪ್ರೇರಿತ ಬಂದ್ಗೆ ಕರೆ ಕೊಟ್ಟಿದೆ.
ಎಂಸಿಎ ವಿದ್ಯಾರ್ಥಿ ನೇಹಾ ಹತ್ಯೆ ಖಂಡಿಸಿ ಹುಬ್ಬಳ್ಳಿ-ಧಾರವಾಡಗಳಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಶಾಸಕ ಮಹೇಶ್ ಟೆಂಗಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಲಿದೆ. ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಧಾರವಾಡದಲ್ಲಿ ಪ್ರತಿಭಟನೆ ಆಯೋಜನೆಗೊಂಡಿದೆ. ನೇಹಾ ಓದುತ್ತಿದ್ದ ಬಿವಿಬಿ ಕಾಲೇಜು ಮುಖ್ಯ ಗೇಟ್ ಎದುರು ಶ್ರದ್ದಾಂಜಲಿ ಸಭೆ ಆಯೋಜಿಸಲಾಗಿದೆ. ಬಿಜೆಪಿಯ ಪ್ರತಿಭಟನೆಗೆ ವಿವಿಧ ಸಂಘಟನೆಗಳ ಬೆಂಬಲ ಸಿಗುವ ಸಾಧ್ಯತೆಯಿದೆ. ಶ್ರೀರಾಮ ಸೇನೆ ಸಂಘಟನೆ ಮತ್ತು ಎಬಿವಿಪಿಯಿಂದಲೂ ಅವಳಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲೂ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ನೇತೃತವಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸುಮಾರು 10000ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ. ಗಾಂಧಿ ಕಟ್ಟೆಯಿಂದ ಪಟ್ಟದ ವಿವಿಧ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ಎಸಿ ಮೂಲಕ ರಾಜ್ಯಪಾಲರಿಗೆ ದೂರು ನೀಡಲಾಗುತ್ತದೆ.
ಇನ್ನೂ, ಫಯಾಜ್ನ ಕೃತ್ಯ ಖಂಡಿಸಿ ಮುಸ್ಲಿಂ ಸಮುದಾಯ ಇಂದು ಧಾರವಾಡದಲ್ಲಿ ಅರ್ಧ ದಿನ ಬಂದ್ ಘೋಷಿಸಿದೆ. ಆರೋಪಿ ಪರ ಮುಸ್ಲಿಂ ವಕೀಲರು ವಾದ ಮಾಡಬಾರದು ಎಂದು ಅಂಜುಮಾನ್ ಸಂಸ್ಥೆ ಆಗ್ರಹಿಸಿದೆ.
Laxmi News 24×7