ಹಾವೇರಿ, ಮಾ.19: ಜಿಲ್ಲೆಯ ಹಾನಗಲ್(Hangal)ಹೊರವಲಯದಲ್ಲಿತಾನೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯನ್ನ ಯುವಕನೊಬ್ಬ ಹತ್ಯೆಗೈದ ಘಟನೆ ನಡೆದಿದೆ. ಮೂಡೂರು ಗ್ರಾಮದ ದೀಪಾ ಮಂಜಪ್ಪ ಗೊಂದಿ(21) ಮೃತ ರ್ದುದೈವಿ. ಆರೋಪಿ ಮಾಲತೇಶ್ ಎಂಬಾತ ಮೊದಲು ವಿಷ ಕೊಟ್ಟು ಬಳಿಕ ದೀಪಾಳನ್ನು ನೇಣುಹಾಕಿದ್ದಾನೆ. ವಿಷಯ ತಿಳಿದ ಕೋಡಲೇ ಅರಳೇಶ್ವರ ಗ್ರಾಮದ ಆರೋಪಿ ಮಾಲತೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ನಡೆದು ಐದು ದಿನಗಳ ನಂತರ ಕೊಲೆ ಪ್ರಕರಣ ಬಯಲು
ಮುಂದಿನ ತಿಂಗಳ ಏಪ್ರಿಲ್ 12ರಂದು ದೀಪಾ ಜೊತೆಗೆ ಆರೋಪಿ ಮಾಲತೇಶ್ ಮದುವೆ ನಿಗದಿಯಾಗಿತ್ತು. ಆದರೆ, ದಿಢೀರ್ ಯುವತಿ ಕೊಲೆಯಾಗಿದ್ದು, ಎಲ್ಲರನ್ನೂ ಬೆಚ್ಚಿಬಿಳಿಸಿತ್ತು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಪ್ರಕರಣ ಭೇದಿಸಿದ್ದಾರೆ. ಈ ಮೂಲಕ ಕೊಲೆ ನಡೆದು ಐದು ದಿನಗಳ ನಂತರ ಹತ್ಯೆ ಪ್ರಕರಣ ಬಯಲಾಗಿದೆ.
ಹತ್ಯೆಗೆ ಕಾರಣವೇನು?
ಇನ್ನು ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿದಾಗ ಹತ್ಯೆಯ ಹಿಂದಿನ ಕಾರಣವನ್ನ ಬಾಯ್ಬಿಟ್ಟಿದ್ದಾನೆ. ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗಲು ಯುವತಿ ನಿರಾಕರಿಸಿದ್ದ ಹಿನ್ನಲೆ ಕೊಲೆ ಮಾಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ನನಗೆ ಮದುವೆಯಾಗಲು ಇಷ್ಟ ಇಲ್ಲ, ನಮ್ಮ ಮನೆಯವರ ಒತ್ತಾಯಕ್ಕೆ ಒಪ್ಪಿದ್ದೆನೆ, ಜೊತೆಗೆ ನೀನು ನನ್ನ ಮದುವೆಯಾದರೂ, ನಿನ್ನ ಜೊತೆ ಸಂಸಾರ ಮಾಡುವುದಿಲ್ಲ ಎಂದು ಯುವತಿ ಹೇಳಿದ್ದಳಂತೆ. ಈ ಹಿನ್ನಲೆ ಯುವಕ ಆಕೆಗೆ ಎಷ್ಟೇ ಹೇಳಿದರೂ ಕೇಳದೆ ಇದ್ದಾಗ ಕೊಲೆ ಮಾಡಿದ್ದೆನೆ ಎಂದು ಯುವಕ ಒಪ್ಪಿಕೊಂಡಿದ್ದಾನೆ