ಹುಬ್ಬಳ್ಳಿ, ಫೆಬ್ರವರಿ 26: ನವಲಗುಂದ-ನರಗುಂದ ಮಹದಾಯಿ (Mahadayi) ಹೋರಾಟಗಾರರ ಆಕ್ರೋಶ ಮತ್ತೆ ಭುಗಿಲೆದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಅವರ ಕಾರಿಗೆ ಮುತ್ತಿಗೆ ಹಾಕಿ, ಚುನಾವಣೆಗೂ ಮುನ್ನ ಕಳಸಾ-ಬಂಡೂರಿ ಕಾಮಗಾರಿ (Kalasa-banduri work) ಆರಂಭಿಸುವಂತೆ ಒತ್ತಾಯಿಸಿದರು. ಕಳಸಾ-ಬಂಡೂರಿ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ರೈತರು ಹುಬ್ಬಳ್ಳಿಯ ಸಚಿವ ಪ್ರಹ್ಲಾದ್ ಜೋಶಿ ನಿವಾಸದ ಎದುರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕಾಮಗಾರಿ ಆರಂಭವಾಗದೆ, ಮತ ಕೇಳಲು ಬನ್ನಿ ಪಾಠ ಕಲಿಸುತ್ತೇವೆ ಎಂದು ಗುಡುಗಿದರು. ರೈತರ ಎಚ್ಚರಿಕೆಗೆ ತಬ್ಬಿಬ್ಬಾದ ಕೇಂದ್ರ ಸಚಿವ ಜೋಶಿ, ಆರಂಭ ಮಾಡುತ್ತೇವೆ ಮಾಡುತ್ತೇವೆ ಎನ್ನುತ್ತಲೇ ಸ್ಥಳದಿಂದ ಕಾಲ್ಕಿತ್ತರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಎಲ್ಲಾ ಸಂದರ್ಭದಲ್ಲಿ ಕಳಸಾ ಬಂಡೂರಿಗೆ ಅನ್ಯಾಯ ಮಾಡಿದೆ. ಡಿಪಿಆರ್ ಸಹ ಬಿಜೆಪಿ ಮಾಡಿದೆ. ಆದರೆ ಸೋನಿಯ ಗಾಂಧಿ ಗೋವಾಗೆ ಹೋಗಿ ಹನಿ ನೀರು ಕೊಡಲ್ಲ ಅಂದರು. ಫಾರೆಸ್ಟ್ ಕ್ಲಿಯರ್ ಬೇಕಾಗಿದೆ ತಾಂತ್ರಿಕ ಸಮಸ್ಯೆಯಿದೆ. ಹುಲಿ ರಕ್ಷಣೆ ಪ್ರಾಧಿಕಾರ ಅನುಮತಿ ಬೇಕಾಗಿದೆ ಆದರೆ ಅದನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಇವರಿಗೆ ಎಷ್ಟು ನಾಲಿಗೆ ಇದೆ ಅಂತ ಗೊತ್ತಾಗಿದೆ. ಹೀಗಾಗಿ ಇಡೀ ದೇಶದಲ್ಲಿ ಕಾಂಗ್ರೆಸ್ ಪಾರ್ಟಿ ಕುಸಿದಿದೆ. ಮುಂದಿನ ದಿನಗಳಲ್ಲಿ ಈಗಿರುವ 52 ಸೀಟುಗಳು ಸಹ ಕಡಿಮೆ ಆಗಲಿವೆ ಎಂದರು.