ಬರಡಾದ ಕೃಷ್ಣ; ಹನಿ ನೀರಿಗಾಗಿ ರಾಯಚೂರು ಗ್ರಾಮಗಳಲ್ಲಿ ಕಣ್ಣೀರು
ರಾಯಚೂರು, : ರಾಯಚೂರು (Raichur) ಜಿಲ್ಲೆಯ ಎಡ ಮತ್ತು ಬಲಭಾಗದಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ಹರಿಯುತ್ತಿದ್ದರೂ, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ (Drinking Water Crisis). ನೀರಿಲ್ಲದೇ ಆ ಗ್ರಾಮದಲ್ಲಿ ಕಳೆದೊಂದು ವಾರದಿಂದ ಶೇಕಡಾ 60% ರಷ್ಟು ಜನ ಸ್ನಾನವನ್ನೇ ಮಾಡಿಲ್ಲ. ಹೇಗಾದರೂ ಮಾಡಿ ಕುಡಿಯುವುದಕ್ಕಾದರೂ ನೀರಿನ ವ್ಯವಸ್ಥೆ ಮಾಡಿಸಿ ಎಂದು ಗ್ರಾಮಸ್ಥರು ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ.
ತೆಲಂಗಾಣ ಗಡಿಯ ರಾಯಚೂರು ತಾಲೂಕಿನ ಡಿ.ರಾಂಪುರ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಕೃಷ್ಣಾ ನದಿ ತೀರದ ಡಿ.ರಾಂಪುರ, ಕುರುವಕಲ, ಕುರುವಕುರ್ದ ಸೇರಿ ಏಳೆಂಟು ಗ್ರಾಮಗಳಲ್ಲಿ ಹನಿ ನೀರಿಗಾಗಿಯೂ ಜನರು ಪರದಾಡುವಂತಹ ಪರಿಸ್ಥಿತಿ ಇದೆ.
ಕೃಷ್ಣಾ ನದಿ ಮೇಲೆ ಅವಲಂಬಿತವಾಗಿದ್ದ ಗ್ರಾಮಗಳಲ್ಲಿ ಕಳೆದ 10ಕ್ಕೂ ಹೆಚ್ಚು ದಿನಗಳಿಂದ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ಇದೆ. ಭೀಕರ ಬರಗಾಲಕ್ಕೆ ಕೃಷ್ಣಾ ನದಿ ಒಣಗಿ ಹೋಗಿದೆ. ಈ ಹಿನ್ನೆಲೆ ಬೇಸಿಗೆ ಪ್ರಾರಂಭದಲ್ಲೇ ಈ ಭಾಗದ ಜನರಿಗೆ ನೀರಿನ ಸಮಸ್ಯೆ ಶುರುವಾಗಿದೆ. ಮೂರ್ನಾಲ್ಕು ಕಿಮಿ ದೂರ ಸಾಗಿ ಜಮೀನುಗಳಲ್ಲಿನ ಬೋರ್ ವೆಲ್ ನೀರನ್ನ ತಂದು ಜನ ಜೀವನ ಸಾಗಿಸಬೇಕಿದೆ. ಇತ್ತ ನಿತ್ಯ ನೂರಾರು ಗ್ರಾಮಸ್ಥರು ನೀರಿಗೆ ದುಂಬಾಲು ಬೀಳುತ್ತಿರುವ ಹಿನ್ನೆಲೆ ಬೆಳೆಗೆ ನೀರು ಸಾಕಾಗಲ್ಲ ಅಂತ ಜಮೀನಿನ ಮಾಲೀಕರು ಕೂಡ ನಿತ್ಯ ನೀರು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.