ಸದನದಲ್ಲಿ ಧ್ವನಿಸಿದ ರೈತರ ಬಂಧನ ಪ್ರಕರಣ – ತುರ್ತು ಕ್ರಮಕ್ಕೆ ಸ್ಪೀಕರ್ ಸೂಚನೆ!
ಬೆಂಗಳೂರು : ಪ್ರತಿಭಟನೆಗಾಗಿ (Protest) ದೆಹಲಿಗೆ (Newdelhi) ತೆರಳುತ್ತಿದ್ದ ರೈತರನ್ನು (Farmers) ದೇಶಾದ್ಯಂತ ಬಂಧಿಸಲಾಗಿದೆ. ಈ ಪೈಕಿ ಕರ್ನಾಟಕದ ರೈತರೂ ಸಹ ಸೆರೆಯಾಗಿದ್ದು ಅವರ ಬಿಡುಗಡೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ (Karnataka Raita sangha) ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಬುಧವಾರ ಸದನದಲ್ಲಿ ದನಿಯತ್ತಿದರು.
ರೈತರ ಬಂಧನ ಖಂಡನೀಯ. 70 ಬಂಧಿತ ರೈತರ ಪೈಕಿ 25 ಮಂದಿ ಮಹಿಳೆಯರೂ ಇದ್ದಾರೆ. ಅವರ ಬಿಡುಗಡೆಗೆ ಸರ್ಕಾರ ಕೂಡಲೇ ಪ್ರಯತ್ನಿಸಬೇಕು ಎಂದು ಅವರು ಸ್ಪೀಕರ್ ಬಳಿ ಮನವಿ ಮಾಡಿದರು.
ಇದಕ್ಕೆ ಉತ್ತರ ನೀಡಿದ ಸಚಿವ ಮಹದೇವಪ್ಪ, ಪ್ರತಿಭಟನೆ ಹಾಗೂ ಧರಣಿಗಳು ಜನಸಾಮಾನ್ಯರ ಹಕ್ಕು. ಇದನ್ನು ಹತ್ತಿಕ್ಕುವುದು ತಪ್ಪು. ಸರ್ಕಾರ ಈ ಬಗ್ಗೆ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಖುದ್ದು ಮುಖ್ಯಮಂತ್ರಿ ಹಾಗೂ ಗೃಹಸಚಿವರೇ ಈ ಬಗ್ಗೆ ಸಭೆಗೆ ಸ್ಪಷ್ಟೀಕರಣ ನೀಡಲಿದ್ದಾರೆ ಎಂದರು.
ಸಭಾಪತಿ ಯು.ಟಿ. ಖಾದರ್ ಮಾತನಾಡಿ, ದೆಹಲಿಗೆ ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರದೇಶ ಸರ್ಕಾರದ ಜೊತೆ ಮಾತನಾಡಿ ರೈತರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.