ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟದ (Illegal liquor sale)ಹಾವಳಿ ಮಿತಿ ಮೀರಿದೆ . ರಾತ್ರಿ 12.00 ಗಂಟೆಗೆ ಗೃಹಿಣಿಯರು ನನಗೆ ಕರೆ ಮಾಡಿ, ಈ ಅಕ್ರಮದಲ್ಲಿ ನಿಮ್ಮ ಶಾಸಕರ ಪಾಲೂ ಇದೆಯೇ?, ಯಾಕೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸುತ್ತಾರೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅಳಲು ತೋಡಿಕೊಂಡಿದ್ದಾರೆ.
ಮಂಗಳವಾರ ಸದನದಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಚರ್ಚೆ ನಡೆಯುವ ವೇಳೆ ಅವರು ಮಾತನಾಡಿದರು.
ಶಾಸಕ ಧೀರಜ್ ಮುನಿರಾಜು ಅಬಕಾರಿ ಸಚಿವರಲ್ಲಿ ಕೇಳಿದ ಪ್ರಶ್ನೆ ಚರ್ಚೆಗೆ ಕಾರಣವಾಯಿತು . ಎಷ್ಟು ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಾಗಿದೆ ಎಂದು ಧೀರಜ್ ಮುನಿರಾಜು ಪ್ರಶ್ನೆಗೆ ಅಬಕಾರಿ ಸಚಿವರು ಉತ್ತರ ಒದಗಿಸಿ ಕಳೆದ ಒಂದು ವರ್ಷದಲ್ಲಿ 138 ಪ್ರಕರಣಗಳನ್ನು ದಾಖಲಿಸಿ 152 ಮಂದಿಯನ್ನು ಬಂಧಿಸಲಾಗಿದೆ ಎಂದರು.
ಆಗ ಧೀರಜ್ ಮುನಿರಾಜು ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಪ್ರತಿ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಜೊತೆಗೆ ಆಂಧ್ರದ ಗಡಿ ಜಿಲ್ಲೆಗಳಿಂದ ಸೇಂದಿಯನ್ನೂ ತಂದು ಮಾರುತ್ತಿದ್ದಾರೆ. ಈ ಕುರಿತು ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದರು. ಆರಗ ಜ್ಞಾನೇಂದ್ರ ಅವರೂ ಇದಕ್ಕೆ ದನಿಗೂಡಿಸಿ, ಅಕ್ರಮ ಮದ್ಯ ಮಾರುವವರ ಮೇಲೆ ಮಾತ್ರವಲ್ಲದೇ ಅವರಿಗೆ ದೊಡ್ಡ ಪ್ರಮಾಣದಲ್ಲಿ ಮದ್ಯ ಒದಗಿಸುವವರ ಮೇಲೂ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು