ನವದೆಹಲಿ, ಜನವರಿ 19: ಕಾವೇರಿ ನೀರು ವ್ಯಾಜ್ಯ ನ್ಯಾಯಾಧಿಕರಣದ (CWDT) ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಅಂತಿಮ ಆದೇಶದಲ್ಲಿ ಹೇಳಿದ ಪ್ರಮಾಣದಲ್ಲಿ ತಮಿಳುನಾಡಿಗೆ ಜನವರಿಯ ಬಾಕಿ ಉಳಿದಿರುವ ದಿನಗಳು ಹಾಗೂ ಫೆಬ್ರವರಿಯಲ್ಲಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಗುರುವಾರ ಆದೇಶ ನೀಡಿದೆ.
ಸಿಡಬ್ಲ್ಯುಆರ್ಸಿ ಅಧ್ಯಕ್ಷರಾದ ವಿನೀತ್ ಗುಪ್ತಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಾವೇರಿ ಜಲಾನಯನ ಪ್ರದೇಶದ ನೀರಿನ ಸ್ಥಿತಿಗತಿ ಮತ್ತು ಬೆಳೆಗಳ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಲಾಯಿತು.
ಜನವರಿಯ ಮುಂದಿನ ದಿನಗಳಲ್ಲಿ ತಮಿಳುನಾಡಿಗೆ ಪ್ರತಿ ದಿನ 1,182 ಕ್ಯೂಸೆಕ್ ಹಾಗೂ ಫೆಬ್ರವರಿ ತಿಂಗಳಲ್ಲಿ ಪ್ರತಿ ದಿನ 998 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸಿಡಬ್ಲ್ಯುಆರ್ಸಿ ಸೂಚನೆ ನೀಡಿದೆ.
19 ಟಿಎಂಸಿಎಫ್ಟಿ ಹಾಗೂ ಜನವರಿ 19ರ ವರೆಗೆ ಬಾಕಿ ಇರಿಸಿಕೊಂಡಿರುವ 7.61 ಟಿಎಂಸಿಎಫ್ಟಿ ನೀರನ್ನು ಮೇ ತಿಂಗಳ ಒಳಗೆ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಬೇಕು ಎಂದು ಸಭೆಯಲ್ಲಿ ತಮಿಳುನಾಡು ಸರ್ಕಾರ ಮನವಿ ಮಾಡಿದೆ.
ತಮಿಳುನಾಡಿನ ಬೇಡಿಕೆಯನ್ನು ಒಪ್ಪಲಾಗದು ಎಂದು ವಾದ ಮಂಡಿಸಿದ ಕರ್ನಾಟಕ, ಕಾವೇರಿ ಜಲಾನಯನ ಪ್ರದೇಶದ ಎಲ್ಲ ನಾಲ್ಕು ಜಲಾಶಯಗಳಲ್ಲಿ ಕೂಡ ಶೇ 52ರಷ್ಟು ಸಂಗ್ರಹ ಕೊರತೆ ಇದೆ ಎಂದು ತಿಳಿಸಿತು.
ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುವವರೆಗೆ ಕುಡಿಯುವ ನೀರು ಮತ್ತು ನೀರಾವರಿಯ ಬೇಡಿಕೆಯನ್ನು ಪೂರೈಸಲು ಕಾವೇರಿ ಜಲಾನಯನ ಪ್ರದೇಶಗಳ ಜಲಾಶಯಗಳಲ್ಲಿ ಲಭ್ಯವಿರುವ ನೀರು ಅತೀ ಅಗತ್ಯ ಎಂದು ಕರ್ನಾಟಕ ವಾದಿಸಿದೆ.
ಈ ಹಿಂದಿನ ಹಲವು ಸಭೆಗಳಲ್ಲಿ ಕೂಡ ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯುಆರ್ಸಿ ಸೂಚಿಸುತ್ತಲೇ ಬಂದಿದೆ. ಆದರೆ, ಮಳೆ ಕೊರತೆ, ನೀರಿನ ಕೊರತೆಯ ಕಾರಣ ಕರ್ನಾಟಕ ಸಂಕಷ್ಟ ಅನುಭವಿಸುತ್ತಿದೆ.