ಬೆಂಗಳೂರು: ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರನ್ನು ಭೇಟಿಯಾಗಿ ಬರ ಪರಿಹಾರಕ್ಕೆ ಮನವಿ ಮಾಡಿದ್ದರು. ಹೀಗೆ ಅವರು ತೆರಳಿದ್ದು, ವಾಪಾಸ್ ಬಂದಿದ್ದು ಮಾತ್ರ ಐಶಾರಾಮಿ ವಿಮಾನದಲ್ಲಿ ಆಗಿದೆ.
ಇದನ್ನು ಸ’ಮಜಾವಾದಿ’ ಸಿದ್ಧರಾಮಯ್ಯನವರ ಸಾಮಾನ್ಯ ಜೀವನ ನೋಡಿ ಅಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದ್ದಾರೆ.
ಸಿಎಂ ಸಿದ್ಧರಾಮಯ್ಯ ಜೊತೆಗೆ ದೆಹಲಿಯಿಂದ ಬೆಂಗಳೂರಿಗೆ ವಾಪಾಸ್ಸಾಗುತ್ತಿರೋ ಪೋಟೋಗಳನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಂಚಿಕೊಂಡಿದ್ದರು. ಎಕ್ಸ್ ನಲ್ಲಿ ಮಾಡಿರುವಂತ ಪೋಸ್ಟ್ ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮಯ ನಾಯಕರು, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದಿದ್ದರು.ಈ ಪೋಸ್ಟ್ ರೀ ಪೋಸ್ಟ್ ಮಾಡಿರುವಂತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸ”ಮಜಾವಾದಿ” ಸಿದ್ದರಾಮಯ್ಯನವರ ಸಾಮಾನ್ಯ ಜೀವನ! ಶಾಲಾ ಮಕ್ಕಳು ಬಸ್ಸುಗಳು ಸಿಗದೆ ನೇತಾಡಿಕೊಂಡು ಬಿಎಂಟಿಸಿ/ಕೆ.ಎಸ್.ಆರ್.ಟಿ.ಸಿ ಬಸ್ಸುಗಳಲ್ಲಿ ಓಡಾಡುವುದು, ಸರ್ಕಾರದ ಯೋಜನೆಗಳಿಗೆ ಅನುದಾನಗಳ ಕೊರತೆ, ಶಾಲೆಗಳ ನವೀಕರಣಕ್ಕೆ ಹಣದ ಕೊರತೆ ಹಾಗು ಕಾಂಗ್ರೆಸ್ ಭಾಗ್ಯಗಳಿಗೇ ಅನುದಾನದ ಕೊರತೆ ಮಧ್ಯೆ ಸಿದ್ದರಾಮಯ್ಯನವರ ವಿಮಾನ ಪ್ರಯಾಣ ಎಂದು ವ್ಯಂಗ್ಯವಾಡಿದ್ದಾರೆ.