ಗದಗ: ಭಾರತ ಕೇವಲ ಹಿಂದೂಗಳ ದೇಶ ಮಾತ್ರವಲ್ಲ. ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ. ಇದು ಬಹುತ್ವದ ದೇಶ. ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿಂದು ಸರಕಾರಿ ಬಾಲಕಿಯರ ಬಾಲಮಂದಿರ ಉದ್ಘಾಟಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1950ರಲ್ಲಿ ಜನಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾರತ ಕೇವಲ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದರು.
ಎಬಿವಿಪಿ, ಭಜರಂಗದಳ ಇವೆಲ್ಲಾ ಬಿಜೆಪಿಯ ಅಂಗಸಂಸ್ಥೆಗಳು. ಸುಳ್ಳು ಹೇಳುವುದೇ ಇವರ ಕೆಲಸ. ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. 4 ಗ್ಯಾರಂಟಿಗಳನ್ನು ಸರ್ಕಾರ ಈಗಾಗಲೇ ಈಡೇರಿಸಿದೆ. 5ನೇ ಗ್ಯಾರಂಟಿಯನ್ನು 2024ರ ಜನವರಿಯಲ್ಲಿ ಜಾರಿಗೊಳಿಸಲಾಗುವುದು. ಸರಕಾರದ ಬಳಿ ಅನುದಾನದ ಕೊರತೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನೆರೆಯ ಕೇರಳದಲ್ಲಿ ಕೋವಿಡ್ ರೂಪಾಂತರಿ ತಳಿ ಸೋಂಕು ವೇಗವಾಗಿ ವ್ಯಾಪಿಸುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸೋಂಕು ವ್ಯಾಪಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಮ್ಮ ಪೊಲೀಸರು ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಸಮರ್ಥರಿದ್ದಾರೆ. ವಿಪಕ್ಷಗಳು ಪ್ರಕರಣವನ್ನು ಸಿಬಿಐ, ಸಿಒಡಿಗೆ ಕೊಡಬೇಕು ಎಂದು ಒತ್ತಾಯಿಸಿದರೆ, ಯಾವುದೇ ಸಂಸ್ಥೆಗೂ ಪ್ರಕರಣವನ್ನು ವರ್ಗಾಯಿಸಲು ನಾವು ಸಿದ್ಧವಿದ್ದೇವೆ. ಒಟ್ಟಾರೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಸಿಎಂ ಹೇಳಿದರು.
ಜಾತಿ ಗಣತಿ ವರದಿ ವಿಚಾರ: ಜಾತಿಗಣತಿ ವರದಿ ವಿಚಾರವಾಗಿ ಮಾತನಾಡಿದ ಸಿಎಂ, ಕಾಂತರಾಜು ಆಯೋಗದ ವರದಿಯನ್ನು ಹಿಂದುಳಿದ ವರ್ಗದ ಆಯೋಗ ಇನ್ನೂ ಸರಕಾರಕ್ಕೆ ಸಲ್ಲಿಸಿಲ್ಲ. ಆಯೋಗ ವರದಿ ಸಲ್ಲಿಸಿದಾಗ ಆ ಬಗ್ಗೆ ಚಿಂತನೆ ಮಾಡುತ್ತೇನೆ. ವರದಿ ಸಲ್ಲಿಕೆಗೂ ಮುನ್ನ ವಿರೋಧಿಸುವುದು ಸರಿಯಲ್ಲ. ವರದಿಯಲ್ಲೇನಿದೆ ಎನ್ನುವುದು ಖುದ್ದು ನನಗೂ ಗೊತ್ತಿಲ್ಲ. ಅದು ಹೇಗೆ ಅವೈಜ್ಞಾನಿಕ ಎಂದು ಆರೋಪ ಮಾಡುತ್ತಾರೆ. ಆಯೋಗದ ವರದಿಯನ್ನು ನೋಡಿ ಪರಾಮರ್ಶೆ ಮಾಡಬೇಕು. ಮುಂಚಿತವಾಗಿಯೇ ವಿರೋಧಿಸುವುದು ಸರಿಯಲ್ಲ ಎಂದರು.
Laxmi News 24×7