Breaking News

ಚಿತ್ರ ನಿರ್ದೇಶಕ ರಾಕ್​ಲೈನ್ ವೆಂಕಟೇಶ್‌ ಸಹೋದರನ ಮನೆಯಲ್ಲಿ ಕಳ್ಳತನ ಎಸಗಿದ್ದ ನೇಪಾಳ ಮೂಲದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Spread the love

ಬೆಂಗಳೂರು : ವಿದೇಶ ಪ್ರವಾಸಕ್ಕೆ ತೆರಳಿದ್ದ ರಾಕ್ ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ ಎಸಗಿದ್ದ 7 ಜನ ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ, ನಾರಾ ಬಹದ್ದೂರ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ ಹಾಗೂ ಶಾದಲ ಶಾಹಿ ಎಂದು ಗುರುತಿಸಲಾಗಿದೆ.

ಬಂಧಿತರ ಪೈಕಿ ಆರೋಪಿಯೊಬ್ಬ ಭ್ರಮರೇಶ್ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ‌ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ. ಆತನೊಂದಿಗೆ ಉಳಿದ ಐವರು ಆರೋಪಿಗಳು ವಾಸವಿದ್ದರು. ಮಹಾಲಕ್ಷ್ಮಿ ಲೇಔಟ್​ನ ನಾಗಪುರ ವಾರ್ಡಿನಲ್ಲಿ ವಾಸವಿರುವ ರಾಕ್​ಲೈನ್ ವೆಂಕಟೇಶ್ ಸಹೋದರ‌ ಭ್ರಮರೇಶ್ ಅಕ್ಟೋಬರ್ 21ರಂದು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅಕ್ಟೋಬರ್ 29ರಂದು ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿತ್ತು.

ಮೂರು ತಿಂಗಳುಗಳಿಂದಲೂ ಆರೋಪಿಗಳು ಭ್ರಮರೇಶ್ ಮನೆಯ ಮೇಲೆ ಕಣ್ಣಿಟ್ಟಿದ್ದರು. ಭ್ರಮರೇಶ್​ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿರುವುದನ್ನು ಅರಿತು ಖದೀಮರು ಕಳ್ಳತನ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಅದರಂತೆ ತಾವಿದ್ದ ನಿರ್ಮಾಣ ಹಂತದ ಕಟ್ಟಡದಿಂದ ಭ್ರಮರೇಶ್ ಮನೆಯ ಕಟ್ಟಡಕ್ಕೆ ಜಿಗಿದು ಕಿಟಕಿಯ ಸರಳುಗಳನ್ನ ಮುರಿದು ಒಳ ಪ್ರವೇಶಿಸಿದ್ದರು. ಬಳಿಕ ಮನೆಯಲ್ಲಿದ್ದ 5 ಕೆಜಿ ಚಿನ್ನಾಭರಣ ಮತ್ತು 6 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಭ್ರಮರೇಶ್ ನೀಡಿದ್ದ ದೂರಿನನ್ವಯ ಕಾರ್ಯಪ್ರವೃತ್ತರಾದ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು, ಕೃತ್ಯ ನಡೆದ ಸ್ಥಳದ ಫಿಂಗರ್ ಪ್ರಿಂಟ್ಸ್ ಹಾಗೂ ಅಕ್ಕಪಕ್ಕದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡು 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.53 ಕೋಟಿ ಮೌಲ್ಯದ 3.01 ಕೆಜಿ ಚಿನ್ನಾಭರಣ, 562 ಗ್ರಾಂ ಬೆಳ್ಳಿ, 16 ವಿವಿಧ ಕಂಪನಿಯ ವಾಚುಗಳು ಹಾಗೂ 40 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಬಂಧಿತರ ಪೈಕಿ ಓರ್ವ ವ್ಯಕ್ತಿ ಹಳೆಯ ರೂಢಿಗತ‌ ಆರೋಪಿಯಾಗಿದ್ದು, ಬೆಂಗಳೂರು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಸುಮಾರು 15 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ