ಹಾವೇರಿ: ಗೌರಿ ಹುಣ್ಣಿಮೆ ಬಂದರೆ ಸಾಕು ಉತ್ತರ ಕರ್ನಾಟಕದಲ್ಲಿ ಸಂಭ್ರಮ ಮನೆಮಾಡುತ್ತದೆ. ಅದರಲ್ಲೂ ಹೆಂಗಳೆಯರಂತೂ ಈ ಹಬ್ಬದ ಆಚರಣೆಗೆ ತುದಿಗಾಲಲ್ಲಿ ನಿಂತಿರುತ್ತಾರೆ. ಗೌರಿ ಹುಣ್ಣಿಮೆಯೆಂದರೆ ಸಕ್ಕರೆ ಗೊಂಬೆಗಳು ಇರಲೇಬೇಕು. ಹಿಂದೂಗಳು ಆಚರಿಸುವ ಈ ಹಬ್ಬಕ್ಕೆ ಹಾವೇರಿಯ ಹಲವು ಮುಸ್ಲಿಂ ಕುಟುಂಬಗಳೂ ಕೂಡಾ ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತವೆ.
ಕಳೆದ ಮೂವತ್ತು ವರ್ಷಗಳಿಂದ ಇಲ್ಲಿನ ಹಲವು ಕುಟುಂಬಗಳು ಸಕ್ಕರೆ ಗೊಂಬೆಗಳನ್ನು ತಯಾರಿಸುತ್ತಿದ್ದಾರೆ. ಇಂತಹ ಕುಟುಂಬಗಳಲ್ಲಿ ಬಾಬಣ್ಣ ವೀರಾಪುರ ಕುಟುಂಬವೂ ಒಂದು. ಇವರು ಗೌರಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಇಂಥ ಗೊಂಬೆಗಳ ತಯಾರಿಯಲ್ಲಿ ನಿರತರಾಗುತ್ತಾರೆ. ಕ್ವಿಂಟಲ್ಗಟ್ಟಲೆ ಸಕ್ಕರೆ ತಂದು ನೀರಿನಲ್ಲಿ ಹಾಕಿ, ಪಾಕ ಮಾಡಲಾಗುತ್ತದೆ. ಈ ಸಕ್ಕರೆ ಪಾಕಕ್ಕೆ ಅಡುಗೆಗೆ ಬಳಸುವ ಬಣ್ಣಗಳನ್ನು ಬಳಸಿ ಮಿಶ್ರಣ ಮಾಡುತ್ತಾರೆ. ಈ ರೀತಿ ಸಿದ್ಧಪಡಿಸಿದ ಪಾಕವನ್ನು ನಿಗದಿಪಡಿಸಿದ ಪಡಿಯಚ್ಚುಗಳಲ್ಲಿ ಹಾಕಬೇಕು. ಪಡಿಯಚ್ಚುಗಳಲ್ಲಿ ಸ್ವಲ್ಪ ಹೊತ್ತು ಬಿಟ್ಟು ತೆಗೆದರೆ ಸಕ್ಕರೆ
ಗೊಂಬೆಗಳು ಸಿದ್ಧ.
ಗಣೇಶ, ಈಶ್ವರ, ಆನೆ, ಒಂಟಿ, ಗೋಪುರ, ದೇವಸ್ಥಾನ, ಮೊಸಳೆ ಸೇರಿದಂತೆ ವಿವಿಧ ಆಕೃತಿಗಳಲ್ಲಿ ಸಕ್ಕರೆ ಗೊಂಬೆಗಳನ್ನು ತಯಾರಿಸಲಾಗುತ್ತದೆ. ಹೀಗೆ ತಯಾರಾದ ಗೊಂಬೆಗಳನ್ನು ಕೆ.ಜಿಗಟ್ಟಲೆ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ. ಸಕ್ಕರೆ ಗೊಂಬೆಗಳನ್ನು ಗೌರಿಹುಣ್ಣಿಮೆಯ ದಿನ ಚಿಕ್ಕ ಹೆಣ್ಣುಮಕ್ಕಳು ತಟ್ಟೆಯಲ್ಲಿಟ್ಟು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ ಬರುವರು. ಓಣಿಯ ಪ್ರಮುಖರ ಮನೆಗಳಲ್ಲಿ ಸ್ಥಾಪಿಸುವ ಗೌರಮ್ಮನಿಗೆ ಸಕ್ಕರೆ ಗೊಂಬೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸುತ್ತಾರೆ.
ಹೊಸದಾಗಿ ನಿಶ್ಚಿತಾರ್ಥವಾದ ಗಂಡುಮಕ್ಕಳು ಹೆಣ್ಣಿನ ಮನೆಗೆ ಈ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ರೀತಿ ತೆಗೆದುಕೊಂಡು ಹೋದ ಗೊಂಬೆಗಳನ್ನಿಟ್ಟು ಮದುವೆಯಾಗಲಿರುವ ಯುವತಿಯರಿಗೆ ಆರತಿ ಬೆಳಗಲಾಗುತ್ತದೆ.