ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗಡಿ ಅಂಚಿನಲ್ಲಿರುವ ತಮಿಳುನಾಡಿನ ಗುಮಟಾಪುರ ಗ್ರಾಮದಲ್ಲಿ ಸಂಭ್ರಮದಿಂದ ಗೊರೆ ಹಬ್ಬ ಆಚರಿಸಲಾಯಿತು. ಸಗಣಿ ರಾಶಿ ಹಾಕಿ ಅದರಲ್ಲಿ ಹೊರಳಾಡುವ ಗ್ರಾಮಸ್ಥರು ಸಗಣಿಯಲ್ಲೇ ಹೊಡೆದಾಡುವುದು ಈ ಹಬ್ಬದ ವಿಶೇಷತೆ.
ಗೊರೆ ಹಬ್ಬ
ಅಚ್ಚ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿ ತಾಲೂಕಿನ ಗುಮಟಾಪುರದಲ್ಲಿ ಪ್ರತಿವರ್ಷ ಇಲ್ಲಿ ಬಲಿಪಾಡ್ಯಮಿಯ ಮಾರನೇ ದಿನ ಗೊರೆ ಹಬ್ಬ ಆಚರಿಸಲಾಗುತ್ತದೆ. ಅದರಂತೆ ಹಬ್ಬದ ದಿನ ಬೆಳಿಗ್ಗೆ ಗ್ರಾಮದ ಎಲ್ಲರ ಮನೆಯ ಕೊಟ್ಟಿಗೆಗಳಿಂದ ಸಗಣಿಯನ್ನು ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ಗಳ ಮೂಲಕ ತಂದು ಗ್ರಾಮದ ಬೀರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕುತ್ತಾರೆ. ಇದಾದ ನಂತರ ಗ್ರಾಮದ ಹೊಳೆ ದಂಡೆಗೆ ಹೋಗಿ ಇಬ್ಬರು ವ್ಯಕ್ತಿಗಳಿಗೆ ಹುಲ್ಲಿನ ಮೀಸೆ ಗಡ್ಡವನ್ನು ಕಟ್ಟಿ, ಹಣೆಗೆ ನಾಮ ಬಳಿದು, ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ, ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ.
ಗೊರೆ ಹಬ್ಬ
ಕತ್ತೆ ಮೇಲೆ ಮೆರವಣಿಗೆ: ಹೀಗೆ ಕತ್ತೆಯ ಮೇಲೆ ಕುಳ್ಳರಿಸಿ ಮೆರವಣಿಗೆ ಮಾಡುವವರನ್ನು ಕೊಂಡಕಾರರು ಎನ್ನಲಾಗುತ್ತದೆ. ಕೊಂಡಕಾರ ಎಂದರೆ ಸುಳ್ಳುಗಾರ, ಚಾಡಿಕೋರ ಎಂದರ್ಥ. ಹಿಂದೆ ಸುಳ್ಳು ಹೇಳುವ ವ್ಯಕ್ತಿ ಗ್ರಾಮದ ಜನರಲ್ಲಿ ದ್ವೇಷ, ಅಸೂಯೆ ಮೂಡಿಸಿ, ಅಶಾಂತಿಗೆ ಕಾರಣವಾಗಿದ್ದ ಎನ್ನಲಾಗಿದೆ. ಅಂತಹ ವ್ಯಕ್ತಿಗಳಿಗೆ ಯಾವ ರೀತಿ ಶಿಕ್ಷೆ ನೀಡಲಾಗುತ್ತಿತ್ತು ಎಂಬುದರ ಸಂಕೇತವಾಗಿ ಇಬ್ಬರಿಗೆ ಚಾಡಿಕೋರರ ವೇಷ ಹಾಕಿ, ಕತ್ತೆಯ ಮೇಲೆ ಮೆರವಣಿಗೆ ನಡೆಸಲಾಗುತ್ತದೆ. ಬಳಿಕ ಸಗಣಿ ರಾಶಿ ಬಳಿ ಗ್ರಾಮದ ಜನ ಜಮಾಯಿಸುತ್ತಾರೆ.