ಹಿಮಾಚಲಪ್ರದೇಶ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ ಈ ಬಾರಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಗಡಿ ಕಾಯುತ್ತಿರುವ ಸೈನಿಕರೊಂದಿಗೆ ಆಚರಿಸಿದ್ದಾರೆ.
ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ.
ಹಿಮಾಚಲಪ್ರದೇಶದ ಲೆಪ್ಚಾ ಪೋಸ್ಟ್ಗೆ ಭಾನುವಾರ ಭೇಟಿ ನೀಡಿದ ಪ್ರಧಾನಿ, ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು. ಐಟಿಬಿಪಿ ಸೇನಾಧಿಕಾರಿಗಳ ಸಮವಸ್ತ್ರದಲ್ಲಿದ್ದ ಪ್ರಧಾನಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಅವರು, ಭಾರತವು ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭದ್ರತಾ ಪಡೆಗಳ ಸಾಮರ್ಥ್ಯ ಏರಿಕೆಯ ಜೊತೆಗೆ, ನಮ್ಮ ಮೇಲೆ ವಿಶ್ವದ ನಿರೀಕ್ಷೆಗಳೂ ಹೆಚ್ಚುತ್ತಿವೆ. ಗಡಿಗಳ ರಕ್ಷಣೆ ಅಗತ್ಯವಾಗಿದೆ. ದೇಶದಲ್ಲಿ ಶಾಂತಿ ನೆಲೆಸಿದೆ ಎಂದರೆ ಅದರಲ್ಲಿ ಯೋಧರ ಪಾತ್ರ ಬಲುದೊಡ್ಡದು. ವೀರ ಸೇನಾನಿಗಳು ಹಿಮಾಲಯದಂತಹ ಗಡಿಗಳಲ್ಲಿ ನಿಂತಿರುವವರೆಗೆ ಭಾರತ ಸುರಕ್ಷಿತ ಎಂದು ಪ್ರಧಾನಿ ಹೇಳಿದರು.