ಶಿವಮೊಗ್ಗ: ಮೂರು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆ ಸುರಕ್ಷಿತವಾಗಿ ಪತ್ತೆಯಾಗಿರುವ ಘಟನೆ ಹೊಸನಗರ ತಾಲೂಕಿನ ಸಾದಗಲ್ಲು ಗ್ರಾಮದಲ್ಲಿ ನಡೆದಿದೆ.
ಶಾರದಮ್ಮ (85) ಎಂಬ ವೃದ್ಧೆಯು ಹೊಸನಗರ ತಾಲೂಕಿನ ಸಾದಗಲ್ಲು ಗ್ರಾಮದ ನಿವಾಸಿ. ಇವರು ಕಳೆದ ಭಾನುವಾರ ಮನೆ ಹಿಂಭಾಗದ ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದರು. ಭಾನುವಾರ ರಾತ್ರಿಯಾದರೂ ಮನೆಗೆ ಶಾರದಮ್ಮ ಬಾರದ ಕಾರಣ ಮನೆಯವರು ಹುಡುಕಾಟ ಪ್ರಾರಂಭಿಸಿದ್ದರು. ಆದರೆ ಎಲ್ಲೂ ಪತ್ತೆ ಆಗಿರಲಿಲ್ಲ. ನಂತರ ಕುಟುಂಬಸ್ಥರು ಬೆಳಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವೃದ್ಧೆ ಶಾರದಮ್ಮಪೊಲೀಸರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸೋಮವಾರ ಸಾದಗಲ್ಲು, ಚಿಕ್ಕಟ್ಟಬ್ಬಿ ಸುತ್ತಮುತ್ತಲ ಕೆರೆ, ಬಾವಿ ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಸೋಮವಾರ ಶಾರದಮ್ಮ ಪತ್ತೆಯಾಗಲಿಲ್ಲ. ಪುನಃ ಮಂಗಳವಾರ ಪೊಲೀಸರು ಶ್ವಾನದಳದೊಂದಿಗೆ, ಅರಣ್ಯ ಇಲಾಖೆ, ವೃದ್ಧೆಯ ಸಂಬಂಧಿಕರು, ಗ್ರಾಮಸ್ಥರು ಸೇರಿ ಹುಡುಕಾಟ ಪ್ರಾರಂಭಿಸಿದ್ದರು. ಆದರೂ ಸಹ ಶಾರದಮ್ಮರ ಗುರುತು ಪತ್ತೆಯಾಗಿರಲಿಲ್ಲ.
ಕಾಡಿನಲ್ಲಿ ಇರುವ ಪ್ರಾಣಿಗಳಿಗೆ ಶಾರದಮ್ಮ ಬಲಿಯಾಗಿರಬಹುದೆಂದು ಕುಟುಂಬಸ್ಥರು ಭಾವಿಸಿದ್ದರು. ಕೊನೆಯದಾಗಿ ಹುಡುಕಾಟ ನಡೆಸಲು ತೀರ್ಮಾನಿಸಿ ಕುಟುಂಬಸ್ಥರು ಮನೆಗೆ ವಾಪಸಾದಾಗ, ಶಾರದಮ್ಮ ಪುತ್ರನಿಗೆ ಅವರು ಬದುಕಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಸುದ್ದಿ ಕೇಳಿದ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಕಾಡಿನೊಳಗೆ ಎರಡು ರಾತ್ರಿ ಎರಡು ಹಗಲು ಕಳೆದ ಶಾರದಮ್ಮ: ಭಾನುವಾರ ಮಧ್ನಾಹ್ನ ಶಾರದಮ್ಮನವರು ತೋಟಕ್ಕೆ ಹೋದಾಗ ದನಗಳನ್ನು ಓಡಿಸಿಕೊಂಡು ಮುಂದೆ ಹೋಗಿದ್ದಾರೆ. ಈ ವೇಳೆಗೆ ಅವರು ಮನೆಯ ದಾರಿಯನ್ನು ತಪ್ಪಿದ್ದಾರೆ. ಇವರ ಜೊತೆ ಬಂದಿದ್ದ ನಾಯಿ ಇವರನ್ನು ಹಿಂಬಾಲಿಸಿಕೊಂಡು ಹೋಗಿದೆ. ನಿನ್ನೆ ಮಧ್ಯಾಹ್ನ ಶಾರದಮ್ಮನವರಿಗೆ ನಾಲ್ಕೈದು ದನಗಳು ಕಾಣಿಸಿಕೊಂಡಿದ್ದವು. ಇವರು ದನಗಳು ಸಾಗುವ ದಾರಿಯಲ್ಲಿಯೇ ಸಾಗಿದ್ದರು. ಆದರೆ ದನಗಳು ಮುಂದೆ ಹೋಗಿವೆ. ಇವರಿಗೆ ಎರಡು ದಿನ ಊಟ, ನೀರು ಇಲ್ಲದ ಕಾರಣ ದನಗಳನ್ನು ಹಿಂಬಾಲಿಸಿಕೊಂಡು ಹೋಗಲು ಅಗದೆ ಮತ್ತೆ ದಾರಿ ತಪ್ಪಿಸಿಕೊಂಡಿದ್ದಾರೆ.