ಪುಣೆ (ಮಹಾರಾಷ್ಟ್ರ): ಆನ್ಲೈನ್ ಗೇಮಿಂಗ್ ಆಯಪ್ನಲ್ಲಿ ಒಂದೂವರೆ ಕೋಟಿ ರೂ. ಬಹುಮಾನ ಗೆದ್ದು ಸುದ್ದಿಯಾಗಿದ್ದ ಮಹಾರಾಷ್ಟ್ರದ ಪೊಲೀಸ್ ಅಧಿಕಾರಿ ಸೋಮನಾಥ್ ಝೆಂಡೆ ತಲೆದಂಡವಾಗಿದೆ.
ಅಶಿಸ್ತಿನ ವರ್ತನೆ ಹಾಗೂ ಪೊಲೀಸ್ ಇಲಾಖೆಯ ಪ್ರತಿಷ್ಠೆಗೆ ಕಳಂಕ ತಂದ ಆರೋಪದಡಿ ಸಬ್ ಇನ್ಸ್ಪೆಕ್ಟರ್ ಆಗಿದ್ದ ಸೋಮನಾಥ್ ಅವರನ್ನು ಅಮಾನತುಗೊಳಿಸಲಾಗಿದೆ.
ಪುಣೆಯ ಪಿಂಪ್ರಿ ಚಿಂಚ್ವಾಡ ನಗರದ ಪೊಲೀಸ್ ಮುಖ್ಯ ಕಚೇರಿಯಲ್ಲಿ ಪಿಎಸ್ಐ ಸೋಮನಾಥ್ ಝೆಂಡೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಆನ್ಲೈನ್ ಕ್ರಿಕೆಟ್ ಗೇಮ್ನಲ್ಲಿ 1.5 ಕೋಟಿ ರೂ. ಬಹುಮಾನ ಗೆಲ್ಲುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಇದರ ಬೆನ್ನಲ್ಲೇ ಅವರು ವಿವಾದದ ಸುಳಿಗೂ ಸಿಲುಕಿದ್ದರು. ಇದರಿಂದ ಪೊಲೀಸ್ ಇಲಾಖೆಯು ತನಿಖೆಗೆ ಒಳಪಡಿಸಲಾಗಿತ್ತು. ಇದೀಗ ಈ ತನಿಖಾ ವರದಿ ಬಂದಿದ್ದು, ಇದರ ಆಧಾರದ ಮೇಲೆ ಸೋಮನಾಥ್ ಝೆಂಡೆ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಸಹಾಯಕ ಪೊಲೀಸ್ ಆಯುಕ್ತ ಸತೀಶ್ ಮಾನೆ ಮಾಹಿತಿ ನೀಡಿದ್ದಾರೆ, ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿರುವ ಹಾಗೂ ಅಶಿಸ್ತಿನ ವರ್ತನೆ ಕಾರಣದಿಂದ ಪಿಎಸ್ಐ ಸೋಮನಾಥ್ ಝೆಂಡೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ಸೋಮನಾಥ್ ಝೆಂಡೆ ಕುರಿತು ಮುಂದಿನ ಇಲಾಖಾ ವಿಚಾರಣೆಯನ್ನು ಉಪ ಪೊಲೀಸ್ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.