ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿಯ ಭಾಗ್ಯನಗರದ 10ನೇ ಕ್ರಾಸ್ನಲ್ಲಿ ಇಂದು ಬೆಳಗ್ಗೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಕುಟುಂಬದ 14 ವರ್ಷದ ರಜತ್ ಗೌರವ ಮೃತ ಬಾಲಕ. ಕಾರು ತೊಳೆಯುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಈ ಅವಘಡ ಸಂಭವಿಸಿದೆ.
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರಜತ್ ಶಾಲೆಗೆ ರಜೆ ಇದ್ದ ಕಾರಣ, ಬೆಳಗ್ಗೆ ಮನೆ ಮನೆಗೆ ದಿನಪತ್ರಿಕೆ ಹಾಕುವ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಎಂದಿನಂತೆ ಚೌಗಲೆ ಎಂಬವರ ಮನೆಗೆ ಪೇಪರ್ ಹಾಕಲು ತೆರಳಿದಾಗ, ಆ ಮನೆಯವರು ಅಮಾವಾಸೆ ಹಿನ್ನೆಲೆ ಕಾರು ತೊಳೆಯಲು ಹೇಳಿದ್ದಾರೆ. ಅದರಂತೆ, ಕಾರು ತೊಳೆಯಲೆಂದು ಹೋದಾಗ ಕಾರಿನ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿದ ತಕ್ಷಣವೇ ಬಾಲಕನನ್ನು ಚೌಗಲೆ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದರೆ ಆತ ಬದುಕುಳಿಯುತ್ತಿದ್ದ. ಆದರೆ, ಚೌಗಲೆ ಅವರ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ರಜತ್ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸ್ಥಳೀಯರು ಹೇಳಿದ್ದೇನು?: “ಮನೆ ಪರಿಸ್ಥಿತಿ ಅಷ್ಟೊಂದು ಸರಿ ಇಲ್ಲದ್ದರಿಂದ ಹುಡುಗ ಪೇಪರ್ ಹಾಕಲು ಹೋಗುತ್ತಿದ್ದ. ಹೀಗೆ ಚೌಗುಲೆ ಅವರ ಮನೆಗೆ ಪೇಪರ್ ಕೊಡಲು ಹೋದಾಗ, ಕಾರು ತೊಳೆಯಿರಿ ಎಂದು ಹೇಳಿದ್ದಾರೆ. ಅಲ್ಲಿ ಅನಾಹುತವಾಗಿ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಾವಿಗೆ ನ್ಯಾಯ ಸಿಗಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಇಮ್ತಿಯಾಜ್ ಮುಲ್ಲಾ ಒತ್ತಾಯಿಸಿದರು.